ಪೊಷೆಸ್ಟ್ರೂಮ್: ಭಾರತದ ವಿರುದ್ಧ ಯುವ ವಿಶ್ವಕಪ್ ಗೆದ್ದ ನಂತರ ಬಾಂಗ್ಲಾದೇಶ ತಂಡದ ಆಟಗಾರರು ತೋರಿದ ದುರ್ವರ್ತನೆಯನ್ನುಭಾರತದ ಯುವ ಕ್ರಿಕಟ್ ತಂಡದ ನಾಯಕ ಪ್ರಿಯಂ ಗರ್ಗ್ ಟೀಕಿಸಿದ್ದಾರೆ. ‘ಬಾಂಗ್ಲಾ ಆಟಗಾರರ ವರ್ತನೆ ಅಸಹ್ಯ ಮೂಡಿಸುವಂತಿತ್ತು,’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಅವರ ವರ್ತನೆ ಅಸಹ್ಯ ಎನಿಸುವಂತಿತ್ತು. ಇಂಥ ಘಟನೆ ನಡೆಯಬಾರದಿತ್ತು ಎಂದು ನಾನು ಭಾವಿಸುತ್ತೇನೆ. ಆದರೂ ಪರವಾಗಿಲ್ಲ. ನಾವು ಸಾವದಾನದಿಂದಲೇ ವರ್ತಿಸಿದ್ದೇವೆ. ಇದೆಲ್ಲವೂ ಆಟದ ಭಾಗ ಎಂದು ತಂಡಅಂದುಕೊಂಡೆವು,’ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ‘ನಾವು ಒಂದನ್ನು ಗೆದ್ದು ಕೊಂಡರೆ, ಮತ್ತೊಂದನ್ನು ಕಳೆದುಕೊಂಡಿರುತ್ತೇವೆ,’ ಎನ್ನವ ಮೂಲಕ ಬಾಂಗ್ಲಾ ತಂಡವನ್ನು ಅವರು ಪರೋಕ್ಷವಾಗಿ ಟೀಕಿಸಿದ್ದಾರೆ.
ಇನ್ನು ತಂಡದ ಆಟಗಾರರು ತೋರಿದ ದುರ್ವರ್ತನೆ ಬಗ್ಗೆ ಮಾತನಾಡಿರುವ ಬಾಂಗ್ಲಾ ಯುವ ಕ್ರಿಕೆಟ್ ತಂಡ ನಾಯಕ ಅಕ್ಬರ್ ಅಲಿ, ‘ಈ ರೀತಿಯ ಘಟನೆ ನಡೆಯಬಾರದಿತ್ತು. ಅಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ನಿಜಕ್ಕೂ ನನಗೆ ಸರಿಯಾದ ಮಾಹಿತಿ ಇಲ್ಲ. ಆದರೆ, ಫೈನಲ್ ಪಂದ್ಯದ ವೇಳೆ ಆಟಗಾರರು ಭಾವೋದ್ವೇಗಕ್ಕೆ ಒಳಗಾಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾವು ಎದುರಾಳಿ ತಂಡವನ್ನು ವಿಶ್ವಾಸದಿಂದ ಕಾಣಬೇಕು. ಕ್ರೀಡೆಯನ್ನು ಗೌರವಿಸಬೇಕು. ಕ್ರಿಕೆಟ್ ಜಂಟಲ್ಮನ್ಗಳ ಆಟ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನನ್ನ ತಂಡದ ಪರವಾಗಿ ನಾನು ಕ್ಷಮೆ ಕೋರುತ್ತೇನೆ,’ ಎಂದು ಹೇಳಿದ್ದಾರೆ.
ಏನದು ದುರ್ವರ್ತನೆ
ಕ್ರಿಕೆಟ್ಯುವ ವಿಶ್ವಕಪ್ ಗೆದ್ದವೇಳೆ ಬಾಂಗ್ಲಾ ತಂಡ ಹಾಗೂ ಭಾರತದ ಯುವ ಆಟಗಾರರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಭಾನುವಾರನಡೆದಿದೆ.
ಈ ಘಟನೆ ವಿಶ್ವ ಕ್ರಿಕೆಟ್ ಪ್ರೇಮಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ. ಬಾಂಗ್ಲಾ ಯುವ ಆಟಗಾರರು ಭಾರತವನ್ನು ಫೈನಲ್ ನಲ್ಲಿಸೋಲಿಸಿದ ನಂತರಬಾಂಗ್ಲಾ ಆಟಗಾರನೊಬ್ಬ ಭಾರತೀಯ ಆಟಗಾರನ ಕುರಿತು ಆಡಿದ ಮಾತು ಅಲ್ಲಿದ್ದ ಇತರೆ ಭಾರತೀಯ ಆಟಗಾರರನ್ನು ರೊಚ್ಚಿಗೆಬ್ಬಿಸಿತ್ತು. ಇದರಿಂದಾಗಿ ಆಟಗಾರರ ನಡುವೆ ಮಾತಿನ ಚಕಮಕಿ ಆರಂಭಾಯಿತು.
ಈ ಸಂದರ್ಭದಲ್ಲಿ ಭಾರತ ತಂಡದ ನಾಯಕಪ್ರಿಯಂಗರ್ಗ್ ಮಧ್ಯಪ್ರವೇಶಿಸಿದಾಗಲೂ ಬಾಂಗ್ಲಾ ಆಟಗಾರರು ತಮ್ಮ ದರ್ಪ ತೋರಿದರು. ಆಗಎರಡೂ ಆಟಗಾರರ ನಡುವೆ ಘರ್ಷಣೆ ನಡೆಯುವ ಹಂತಕ್ಕೆ ತಲುಪಿದೆ.ಕ್ರಿಕೆಟ್ ಚಿತ್ರೀಕರಣ ನಡೆಸುತ್ತಿದ್ದ ಕ್ಯಾಮರಾಗಳು ಪ್ರೇಕ್ಷಕರ ಗ್ಯಾಲರಿಯತ್ತ ತಮ್ಮ ಗಮನ ಹರಿಸಿದ್ದರಿಂದ ಅಲ್ಲಿ ಏನಾಯಿತು ಎಂದು ತಂಡದ ಆಟಗಾರರನ್ನು ಹೊರತುಪಡಿಸಿ ಬೇರಾರಿಗೂ ತಿಳಿಯದಾಯಿತು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.