ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ | ಭಾರತ ತಂಡದ ಜಿಂಬಾಬ್ವೆ ಪ್ರವಾಸ ರದ್ದು

Last Updated 12 ಜೂನ್ 2020, 11:23 IST
ಅಕ್ಷರ ಗಾತ್ರ

ನವದೆಹಲಿ: ಆಗಸ್ಟ್‌ನಲ್ಲಿ ನಿಗದಿಯಾಗಿದ್ದ ಭಾರತ ಕ್ರಿಕೆಟ್‌ ತಂಡದ ಜಿಂಬಾಬ್ವೆ ಪ್ರವಾಸವನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ)ಶುಕ್ರವಾರ ಕೋವಿಡ್‌–19 ಭೀತಿಯ ಹಿನ್ನೆಲೆಯಲ್ಲಿ ರದ್ದು ಮಾಡಿದೆ.

ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು ಭಾರತ ವಿರುದ್ಧದ ಸೀಮಿತ ಓವರುಗಳ ಸರಣಿಯನ್ನು ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಹೀಗಾಗಿ ಜಿಂಬಾಬ್ವೆ ಪ್ರವಾಸದ ಮೇಲೂ ಕರಿನೆರಳು ಮೂಡಿತ್ತು.

‘ಕೋವಿಡ್‌–19 ಪಿಡುಗಿನ ಕಾರಣ ಭಾರತ ಕ್ರಿಕೆಟ್‌ ತಂಡವು ಶ್ರೀಲಂಕಾ ಹಾಗೂ ಜಿಂಬಾಬ್ವೆ ಪ್ರವಾಸ ಕೈಗೊಳ್ಳುತ್ತಿಲ್ಲ. ಭಾರತ ತಂಡವು ಇದೇ 24ರಂದು ಶ್ರೀಲಂಕಾಕ್ಕೆ ತೆರಳಿ ಆ ತಂಡದ ಎದುರು ತಲಾ ಮೂರು ಏಕದಿನ ಹಾಗೂ ಟ್ವೆಂಟಿ–20 ಪಂದ್ಯಗಳನ್ನು ಆಡಬೇಕಿತ್ತು. ಜಿಂಬಾಬ್ವೆ ಎದುರು ಆಗಸ್ಟ್‌ 22ರಿಂದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಬೇಕಿತ್ತು ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

ಭಾರತದಲ್ಲಿ ಸದ್ಯ ಕೊರೊನಾ ವೈರಾಣು ಸೋಂಕು ಪ್ರಕರಣಗಳ ಸಂಖ್ಯೆ ಮೂರು ಲಕ್ಷಕ್ಕೆ ಸಮೀಪಿಸಿದೆ.

ಭಾರತದ ಆಟಗಾರರು ಇನ್ನೂ ತರಬೇತಿ ಆರಂಭಿಸಿಲ್ಲ. ಜುಲೈಗಿಂತ ಮೊದಲು ಶಿಬಿರ ಆರಂಭವಾಗುವ ಸಾಧ್ಯತೆಯೂ ಇಲ್ಲ. ಪಂದ್ಯಕ್ಕೆ ಸಿದ್ಧವಾಗಲು ಆಟಗಾರರಿಗೆ ಇನ್ನೂ ಆರು ವಾರಗಳ ಅಗತ್ಯವಿದೆ ಎಂಬುದು ತಂಡದ ನೆರವು ಸಿಬ್ಬಂದಿಯ ಅಭಿಮತ.

‘ವಾತಾವರಣ ಸಂಪೂರ್ಣ ಸುರಕ್ಷಿತ ಎಂದೆನಿಸಿದಾಗ ಮಾತ್ರ ಗುತ್ತಿಗೆ ಹೊಂದಿದ ಆಟಗಾರರ ಹೊರಾಂಗಣ ತರಬೇತಿ ಶಿಬಿರಕ್ಕೆ ಅವಕಾಶ ನೀಡಲಾಗುವುದು’ ಎಂದು ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT