ದುಬೈ:ಏಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಭಾನುವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಜಯಿಸಲೇಬೇಕಾದ ಒತ್ತಡದಲ್ಲಿದೆ.
ಪಾಯಿಂಟ್ ಪಟ್ಟಿಯನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೋಲ್ಕತ್ತ ತಂಡವು ಪ್ಲೇ ಆಫ್ ಪ್ರವೇಶಿಸಲು ತನ್ನ ಮುಂದಿರುವ ಎರಡೂ ಪಂದ್ಯಗಳಲ್ಲಿ ಜಯಗಳಿಸಬೇಕು. ಒಂದರಲ್ಲಿ ಸೋತರೂ ಅವಕಾಶವಂಚಿತರಾಗುವ ಸಾಧ್ಯತೆ ದಟ್ಟವಾಗಿದೆ. ಶುಕ್ರವಾರ ಪಂಜಾಬ್ ಕಿಂಗ್ಸ್ ಎದುರು ಫೀಲ್ಡಿಂಗ್ನಲ್ಲಿ ಮಾಡಿಕೊಂಡ ಎಡವಟ್ಟುಗಳಿಂದಾಗಿ ಸೋತಿತ್ತು. ನಾಲ್ಕು ಕ್ಯಾಚ್ಗಳನ್ನು ಕೈಚೆಲ್ಲಿದ್ದ ಫೀಲ್ಡರ್ಗಳಿಂದಾಗಿ ಮಾರ್ಗನ್ ಕೈ ಕೈ ಹಿಸುಕಿಕೊಂಡಿದ್ದರು.
ಅದರಿಂದಾಗಿ ವೆಂಕಟೇಶ್ ಅಯ್ಯರ್ ಅವರ ಚೆಂದದ ಅರ್ಧಶತಕ ವ್ಯರ್ಥವಾಗಿತ್ತು. ರಾಹುಲ್ ತ್ರಿಪಾಠಿ ಮತ್ತು ನಿತೀಶ್ ಯಾದವ್ ಉತ್ತಮ ಲಯದಲ್ಲಿದ್ದಾರೆ. ಅದರಿಂದಾಗಿ ಮಧ್ಯಮ ಕ್ರಮಾಂಕದಲ್ಲಿ ಭರವಸೆ ಹೆಚ್ಚಿದೆ. ಆದರೆ ನಾಯಕ ಮಾರ್ಗನ್ ಬ್ಯಾಟಿಂಗ್ ವೈಫಲ್ಯ ತಂಡವನ್ನು ಕಾಡುತ್ತಿರುವುದು ಸುಳ್ಳಲ್ಲ.
ಟಿಮ್ ಸೌಥಿ, ವರುಣ ಚಕ್ರವರ್ತಿ, ಸುನೀಲ್ ನಾರಾಯಣ್ ಅವರು ಬೌಲಿಂಗ್ ಚೆನ್ನಾಗಿ ಮಾಡುತ್ತಿದ್ದಾರೆ. ಅವರಿಗೆ ಫೀಲ್ಡರ್ಗಳು ಉತ್ತಮ ಬೆಂಬಲ ನೀಡಿದರೆ ಜಯದ ಹಾದಿ ಸುಲಭವಾಗಬಹುದು.
ಆದರೆ, ಈಗಾಗಲೇ ಪ್ಲೇ ಅಫ್ ಹಾದಿಯಿಂದ ಹೊರಬಿದ್ದಿರುವ ಸನ್ರೈಸರ್ಸ್ ತಂಡವು ಕೋಲ್ಕತ್ತದ ಕನಸಿಗೆ ಅಡ್ಡಿಯಾಗುವ ಸಾಧ್ಯತೆಗಳೂ ಇವೆ. ಕೇವಲ ಎರಡು ಪಂದ್ಯಗಳಲ್ಲಿ ಜಯಿಸಿರುವ ಕೇನ್ ಬಳಗವು ಸಮಾಧಾನಕರ ಜಯಕ್ಕಾಗಿ ಪ್ರಯತ್ನಿಸಬಹುದು.