ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಬಲಿಷ್ಠವಾಗಿದ್ದು, ಈ ಪಂದ್ಯ ಗೆಲ್ಲಲು ಭಾರತ ತನ್ನ ಅತ್ಯುತ್ತಮ ಪ್ರದರ್ಶನವನ್ನೇ ನೀಡಬೇಕಿದೆ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಎಂದಿಗೂ ಸೋತಿಲ್ಲ. ಆದರೆ ಈ ಎಲ್ಲದರ ಬಗ್ಗೆ ನಾವು ತಂಡದೊಳಗೆ ಚರ್ಚಿಸಿಲ್ಲ ಎಂದು ಕೊಹ್ಲಿ ತಿಳಿಸಿದರು.
ಟಿ20 ವಿಶ್ವಕಪ್ನಲ್ಲಿ ದುಬೈಯಲ್ಲಿ ಭಾರತ ಭಾನುವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಸವಾಲನ್ನು ಎದುರಿಸಲಿದೆ.
'ಅಂಕಿಅಂಶ ಏನು, ನಾವು ಏನು ಸಾಧನೆ ಮಾಡಿದ್ದೇವೆ ಎಂಬುದರ ಬಗ್ಗೆ ಚರ್ಚಿಸಿಲ್ಲ. ಇಂತಹ ವಿಚಾರಗಳಿಂದ ಗೊಂದಲವು ಸೃಷ್ಟಿಯಾಗುತ್ತದೆ. ಎದುರಾಳಿ ಯಾರು ಎಂಬುದಕ್ಕಿಂತ ಆ ನಿರ್ದಿಷ್ಟ ದಿನದಲ್ಲಿ ನಾವು ಹೇಗೆ ನಮ್ಮ ರಣನೀತಿಯನ್ನು ಕಾರ್ಯಗತಗೊಳಿಸುತ್ತೇವೆ ಎಂಬುದು ಮುಖ್ಯವೆನಿಸುತ್ತದೆ' ಎಂದು ತಿಳಿಸಿದರು.
'ನನ್ನ ಪ್ರಕಾರ ಪಾಕಿಸ್ತಾನ ಯಾವತ್ತೂ ಬಲಿಷ್ಠ ತಂಡವನ್ನು ಹೊಂದಿದೆ. ಅವರ ವಿರುದ್ಧ ಗೆಲ್ಲಲು ನಮ್ಮ ಅತ್ಯುತ್ತಮ ಆಟವನ್ನು ಆಡಬೇಕಿದೆ. ಏಕೆಂದರೆ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಸಾಕಷ್ಟು ಪ್ರತಿಭೆಗಳು ಆ ತಂಡದಲ್ಲಿದ್ದಾರೆ' ಎಂದು ತಿಳಿಸಿದರು.
'ನಮ್ಮ ಪಾಲಿಗೆ ಇದು ಮಗದೊಂದು ಪಂದ್ಯ ಮಾತ್ರವಾಗಿದೆ. ಅಲ್ಲದೆ ಇತರೆ ಪಂದ್ಯಗಳಿಂದ ವಿಭಿನ್ನವಾಗಿಲ್ಲ. ಹೌದು, ಸ್ಟೇಡಿಯಂ ವಾತಾವರಣ ಭಿನ್ನವಾಗಿರಬಹುದು. ಆದರೆ ನಮ್ಮ ಮನಸ್ಥಿತಿ, ಪೂರ್ವ ಸಿದ್ಧತೆ ಹಾಗೂ ಪಂದ್ಯವನ್ನು ಸಮೀಪಿಸುವ ರೀತಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ' ಎಂದು ಹೇಳಿದ್ದಾರೆ.
'ವಿಶ್ವಕಪ್ನಂತಹ ಬಹುರಾಷ್ಟ್ರೀಯ ಟೂರ್ನಿಯು ನಮಗೆ ವಿಭಿನ್ನ ಪ್ರೇರಣೆಯನ್ನು ನೀಡುತ್ತದೆ. ಇದುವರೆಗೆ ಎದುರಿಸದ ತಂಡಗಳ ವಿರುದ್ಧ ಆಡುವ ಅವಕಾಶವಿರುತ್ತದೆ. ಇದರಿಂದ ಹೊಸ ಸವಾಲುಗಳು ಸೃಷ್ಟಿಯಾಗುತ್ತವೆ' ಎಂದು ಹೇಳಿದರು.