ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ: ಮಯಂಕ್ ಬಳಗಕ್ಕೆ ವೈಶಾಖ ಪಡೆ ಸವಾಲು

Published 12 ಆಗಸ್ಟ್ 2023, 14:07 IST
Last Updated 12 ಆಗಸ್ಟ್ 2023, 14:07 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರದಿಂದ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. 

ಆಗಸ್ಟ್ 29ರವರೆಗೆ ಟೂರ್ನಿ ನಡೆಯಲಿದ್ದು ಆರು ತಂಡಗಳು ಹಣಾಹಣಿ ನಡೆಸಲಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರತಿದಿನವೂ ಎರಡು ಪಂದ್ಯಗಳು ನಡೆಯಲಿವೆ.

ಉದ್ಘಾಟನೆ ದಿನದಂದು ಮಧ್ಯಾಹ್ನ ನಡೆಯುವ ಪಂದ್ಯದಲ್ಲಿ ಮಯಂಕ್ ಅಗರವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ವೇಗಿ ವೈಶಾಖ ವಿಜಯಕುಮಾರ್ ನಾಯಕತ್ವದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ಸಂಜೆಯ ಪಂದ್ಯದಲ್ಲಿ   ಹುಬ್ಬಳ್ಳಿ ಟೈಗರ್ಸ್ ಹಾಗೂ ಮೈಸೂರು ವಾರಿಯರ್ಸ್‌ ಹಣಾಹಣಿ ನಡೆಸಲಿವೆ.

ಮಯಂಕ್ ನಾಯಕತ್ವದಲ್ಲಿ ದಕ್ಷಿಣ ವಲಯ ತಂಡವು ಈಚೆಗಷ್ಟೇ  ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ದುಲೀಪ್ ಟ್ರೋಫಿ ಟೂರ್ನಿಯಲ್ಲಿಯೂ ಅವರು ತಂಡದ ಉಪನಾಯಕರಾಗಿದ್ದರು.

ಅವರ ಸಾರಥ್ಯದ ಬೆಂಗಳೂರು ತಂಡದಲ್ಲಿ ಅನುಭವಿ ಅಭಿಮನ್ಯು ಮಿಥುನ್, ಪವನ್ ದೇಶಪಾಂಡೆ, ಯುವ ಆಟಗಾರರಾದ ವಿದ್ಯಾಧರ್ ಪಾಟೀಲ ಮತ್ತು  ಶುಭಾಂಗ್ ಹೆಗಡೆ ಇದ್ದಾರೆ.

ಗುಲ್ಬರ್ಗ ತಂಡದಲ್ಲಿ ದೇವದತ್ತ ಪಡಿಕ್ಕಲ್ ಅವರು  ಬ್ಯಾಟಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಿದ್ದಾರೆ. ಕಳೆದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ವೈಶಾಖ ದೇಶಿ ಕ್ರಿಕೆಟ್‌ನಲ್ಲಿಯೂ ಉತ್ತಮವಾಗಿ ಬೌಲಿಂಗ್ ಮಾಡಿ ಗಮನ ಸೆಳದಿದ್ದರು. ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಲು ಸಿದ್ಧರಾಗಿದ್ದಾರೆ.

ಪ್ರಮುಖ ಅಂಕಿ ಅಂಶ

ಸ್ಪರ್ಧಿಸಲಿರುವ ತಂಡಗಳು –6

ಒಟ್ಟು ಪಂದ್ಯಗಳು –33

ದಿನಗಳು – 17

ಗುಲ್ಬರ್ಗ ಮಿಸ್ಟಿಕ್ಸ್–ಬೆಂಗಳೂರು ಬ್ಲಾಸ್ಟರ್ಸ್‌

ಆರಂಭ: ಮಧ್ಯಾಹ್ನ 1

ಹುಬ್ಬಳ್ಳಿ ಟೈಗರ್ಸ್–ಮೈಸೂರು ವಾರಿಯರ್ಸ್

ಆರಂಭ: ಸಂಜೆ 5.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ಕನ್ನಡ, ಫ್ಯಾನ್‌ಕೋಡ್ ಆ್ಯಪ್

ಮನೀಷ್ ಪಾಂಡೆ
ಮನೀಷ್ ಪಾಂಡೆ
ಕರುಣ್ ನಾಯರ್
ಕರುಣ್ ನಾಯರ್
ಮನೀಷ್–ಕರುಣ್ ಜಿದ್ದಾಜಿದ್ದಿ ಕ
ಕರ್ನಾಟಕ ಕ್ರಿಕೆಟ್‌ನ ಇಬ್ಬರು ಪ್ರಮುಖ ಬ್ಯಾಟರ್‌ಗಳಾದ ಮನೀಷ್ ಪಾಂಡೆ ಮತ್ತು ಕರುಣ್ ನಾಯರ್  ಅವರ ನಾಯಕತ್ವದ ಬಳಗಗಳು ಸಂಜೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಮನೀಷ್ ಪಾಂಡೆ ಹುಬ್ಬಳ್ಳಿ ಟೈಗರ್ಸ್ ಮತ್ತು ಕರುಣ್ ನಾಯರ್ ಮೈಸೂರು ವಾರಿಯರ್ಸ್ ತಂಡಗಳ ನಾಯಕತ್ವ ವಹಿಸಿದ್ದಾರೆ. ಇಬ್ಬರೂ ಆಟಗಾರರು ಭಾರತ ತಂಡದಲ್ಲಿ ಆಡಿರುವ ಅನುಭವಿಗಳು. ಹುಬ್ಬಳ್ಳಿ ತಂಡದಲ್ಲಿ ಈಚೆಗೆ ದೇಶಿ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದ ವೇಗಿ ವಿದ್ವತ್ ಕಾವೇರಪ್ಪ ಸ್ಪಿನ್ನರ್ ಕೆ.ಸಿ. ಕಾರಿಯಪ್ಪ ಪ್ರವೀಣ ದುಬೆ ಮತ್ತು ಲವನೀತ್ ಸಿಸೊಡಿಯಾ ಇದ್ದಾರೆ. ಮೈಸೂರು ತಂಡವು  ಎಲ್ಲ ವಿಭಾಗಗಳಲ್ಲಿ ಉತ್ತ ಆಟಗಾರರನ್ನು ಹೊಂದಿದೆ. ಐರ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಬೌಲರ್ ಪ್ರಸಿದ್ಧ ಕೃಷ್ಣ ಅವರು ಆಡುವ ಸಾಧ್ಯತೆ ಇದೆ. ಸ್ಪಿನ್ನರ್ ಜೆ. ಸುಚಿತ್ ಬ್ಯಾಟರ್ ಆರ್. ಸಮರ್ಥ್ ಕೆ. ಶಶಿಕುಮಾರ್ ಮತ್ತು ಮನೋಜ್ ಬಾಂಢಗೆ ಅವರು ತಂಡದಲ್ಲಿರುವ ಪ್ರಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT