ನವದೆಹಲಿ: ಕೊರೊನಾ ವೈರಸ್ ಸೋಂಕು ತಡೆಗಾಗಿ ಚೆಂಡಿಗೆ ಎಂಜಲು ಬಳಕೆಯನ್ನು ನಿಷೇಧಿಸಿದರೂ ತಾವು ಪರಿಣಾಮಕಾರಿಯಾಗಿ ಸ್ವಿಂಗ್ ಮಾಡುವುದಾಗಿ ಭಾರತ ಕ್ರಿಕೆಟ್ ತಂಡದ ಮಧ್ಯಮವೇಗಿ ಮೊಹಮ್ಮದ್ ಶಮಿ ಹೇಳಿದ್ದಾರೆ.
ಕ್ರಿಕೆಟ್ ಚೆಂಡಿನ ಹೊಳಪು ಕಾಯ್ದುಕೊಳ್ಳಲು ಬೌಲರ್ಗಳು ಎಂಜಲು ಮತ್ತು ಬೆವರು ಬಳಸುವುದು ವಾಡಿಕೆಯಾಗಿದೆ. ಆದರೆ ಇದೀಗ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಎಂಜಲು ಬಳಕೆಯನ್ನು ನಿಷೇಧಿಸಲು ಐಸಿಸಿ ಚಿಂತನೆ ನಡೆಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಮಿ, ‘ಬಾಲ್ಯದಿಂದಲೂ ನಾವು ಎಂಜಲು ಬಳಕೆ ಮಾಡುತ್ತಿದ್ದೇವೆ. ಅದಕ್ಕಾಗಿ ಕಟ್ಟುಬಿದ್ದಿದ್ದೇವೆ. ನೀವು ವೇಗದ ಬೌಲರ್ ಆಗಿದ್ದರೆ ಸಹಜವಾಗಿಯೇ ಈ ಪದ್ದತಿ ರೂಢಿಯಾಗಿರುತ್ತದೆ. ಒಣಚೆಂಡಿನ ಹೊಳಪನ್ನು ಕಾಯ್ದಿಟ್ಟುಕೊಂಡರೆ ಸ್ವಿಂಗ್ ಮಾಡಲು ಸಾಧ್ಯವಿದೆ’ ಎಂದಿದ್ದಾರೆ.
‘ಎಂಜಲು ಮತ್ತು ಬೆವರು ಹಚ್ಚುವುದರಿಂದ ಆಗುವ ಪರಿಣಾಮ ಬೇರೆ. ಆದರೆ ಆದರಿಂದ ಬೌಲರ್ಗೆ ಸಹಾಯಕವಾಗುತ್ತದೆ ಎಂದು ನನಗನಿಸುವುದಿಲ್ಲ. ಎಂಜಲು ಬಳಕೆಯಿಲ್ಲದೇ ಬೌಲಿಂಗ್ ಮಾಡುವ ಅಭ್ಯಾಸ ಮಾಡಿದ್ದೇನೆ. ಇದೀಗ ಕೋವಿಡ್ –19 ಕಾಯಿಲೆ ತಡೆಯಲು ಸಲೈವಾ ಬಳಕೆ ನಿಷೇಧಿಸುವುದು ಸೂಕ್ತವಾಗಿದೆ’ ಎಂದಿದ್ದಾರೆ.
‘ಬಹಳ ದೀರ್ಘ ಕಾಲದಿಂದ ನಾವ್ಯಾರೂ ಬ್ಯಾಟ್, ಬಾಲ್ ಮುಟ್ಟಿಲ್ಲ. ನಾವೆಲ್ಲ ಮನುಷ್ಯರು, ಯಂತ್ರಗಳಲ್ಲ. ಒಮ್ಮೆಲೆ ಸ್ವಿಚ್ ಒತ್ತಿ ಶುರು ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಆಡುವ ಮುನ್ನ 10–15 ದಿನಗಳ ತರಬೇತಿ ಮುಖ್ಯ’ ಎಂದು ಹೇಳಿದ್ದಾರೆ.