ನವದೆಹಲಿ: ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ಭಾರತ ಕ್ರಿಕೆಟ್ ತಂಡದ ಯುವ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ರಿಷಭ್ ಪಂತ್ ಅವರು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಅವರಂತೆ ಬ್ಯಾಟಿಂಗ್ನಲ್ಲಿ ಪ್ರಭುತ್ವ ಸಾಧಿಸಬಲ್ಲರು ಎಂದು ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಹೇಳಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರೊಂದಿಗೆ ಲೈವ್ ಚಾಟ್ ನಡೆಸಿದ ರೈನಾ, ‘ಆತ (ಪಂತ್) ಚೆನ್ನಾಗಿ ಆಡುವಾಗಶ್ರೇಷ್ಠ ಕ್ರಿಕೆಟಿಗನಂತೆ ಕಾಣುತ್ತಾನೆ. ನೀವು ಸಂತಸಗೊಳ್ಳುತ್ತೀರಿ. ಆತನ ಆಟ ನಿಮಗೆ ಯುವರಾಜ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಅವರನ್ನು ನೆನಪಿಸುತ್ತದೆ. ಪಂತ್ ಕೂಡ ಅವರಂತೆಯೇ ಪ್ರಭುತ್ವ ಸಾಧಿಸಬಲ್ಲರು’ ಎಂದು ಹೇಳಿದ್ದಾರೆ.
‘ಪಂತ್ ಫ್ಲಿಕ್ ಶಾಟ್ ಆಡುವಾಗ ರಾಹುಲ್ ದ್ರಾವಿಡ್ ನೆನಪಾಗುತ್ತಾರೆ’ ಎಂದೂ ಹೇಳಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆ ಪಂತ್ ಗಾಯಗೊಂಡಿದ್ದರು. ಹಾಗಾಗಿ ಅವರ ಬದಲು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಕೆ.ಎಲ್.ರಾಹುಲ್ ನಿರ್ವಹಿಸಿದ್ದರು. ಬ್ಯಾಟಿಂಗ್ ಹಾಗೂ ಕೀಪಿಂಗ್ನಲ್ಲಿ ರಾಹುಲ್ ಚುರುಕಿನ ಪ್ರದರ್ಶನ ನೀಡಿದ್ದರಿಂದ ನ್ಯೂಜಿಲೆಂಡ್ ಸರಣಿಗೂ ಅವರನ್ನೇ ಮುಂದುವರಿಸಲಾಯಿತು.
2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಅನುಭವಿ ಆಟಗಾರ ಎಂ.ಎಸ್. ಧೋನಿ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಅವರ ಸ್ಥಾನದಲ್ಲಿ ಆಡುವುದು ಒತ್ತಡದ ಕೆಲಸ. ಇದರಿಂದಾಗಿ ಪಂತ್ ಚೆನ್ನಾಗಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ಇತ್ತೀಚೆಗೆ ರೋಹಿತ್ ಶರ್ಮಾ ಹೇಳಿದ್ದರು.
22 ವರ್ಷದ ಪಂತ್, ಭಾರತ ಪರ 13 ಟೆಸ್ಟ್, 16 ಏಕದಿನ ಹಾಗೂ 27 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಮೂರು ಮಾದರಿಗಳಲ್ಲಿ ಕ್ರಮವಾಗಿ 814, 374 ಹಾಗೂ 410 ರನ್ ಗಳಿಸಿದ್ದಾರೆ.