ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

U19 cricket | ಧವನ್‌ ದಾಖಲೆ ಮುರಿದ ಬಾವಾ;‌ ಭಾರತಕ್ಕೆ 326 ರನ್ ಅಂತರದ ಜಯ

Last Updated 23 ಜನವರಿ 2022, 8:16 IST
ಅಕ್ಷರ ಗಾತ್ರ

ತರೌಬಾ (ಟ್ರಿನಿಡಾಡ್):19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡವು ಉಗಾಂಡ ವಿರುದ್ಧ 326ರನ್‌ ಅಂತರದ ಗೆಲುವು ದಾಖಲಿಸಿದೆ.

ಶನಿವಾರ ನಡೆದ ಪಂದ್ಯದಲ್ಲಿಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, ಆರಂಭಿಕ ಬ್ಯಾಟರ್‌ ಅಂಗಕ್ರಿಷ್ ರಘುವಂಶಿ ಹಾಗೂಮಧ್ಯಮ ಕ್ರಮಾಂಕದ ರಾಜ್ ಬಾವಾ ಗಳಿಸಿದ ಅಮೋಘ ಶತಕಗಳ ಬಲದಿಂದ ನಿಗದಿತ50 ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು405 ರನ್‌ ಕಲೆಹಾಕಿತ್ತು.

ರಘುವಂಶಿ120 ಎಸೆತಗಳಲ್ಲಿ 22 ಫೋರ್ ಹಾಗೂ 4 ಸಿಕ್ಸರ್‌ ಸಹಿತ 144 ರನ್‌ ಗಳಿಸಿದರೆ, ರಾಜ್‌108 ಎಸೆತಗಳಲ್ಲಿ 14 ಬೌಂಡರಿ ಮತ್ತು 8 ಸಿಕ್ಸರ್‌ ಒಳಗೊಂಡ ಅಜೇಯ 162 ರನ್‌ ಚಚ್ಚಿದರು. ಈ ಜೋಡಿ ಮೂರನೇ ವಿಕೆಟ್‌ ಜೊತೆಯಾಟದಲ್ಲಿ206 ರನ್‌ ಕಲೆಹಾಕಿತು. ಇದರ ನೆರವಿನಿಂದಭಾರತ ತಂಡ19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಎರಡನೇ ಬಾರಿಗೆ400ರ ಗಡಿ ದಾಟಿತು. 2004ರಲ್ಲಿ425 ರನ್‌ ಗಳಿಸಿತ್ತು.

ಬೃಹತ್‌ ಗುರಿ ಎದುರು ತಿಣುಕಾಡಿದ ಉಗಾಂಡ, ಕೇವಲ79 ರನ್‌ ಗಳಿಸಿ ಆಲೌಟ್‌ ಆಯಿತು. ನಾಯಕ ಪಾಸ್ಕಲ್‌ ಮುರುಂಗಿ (34) ಮತ್ತು ಮಧ್ಯಮ ಕ್ರಮಾಂಕದರೊನಾಲ್ಡ್‌ ಒಪಿಒ (11) ಹೊರತುಪಡಿಸಿ ಉಳಿದ ಯಾರೂ ಎರಡಂಕಿ ಮೊತ್ತ ದಾಟಲಿಲ್ಲ. ಐವರು ಸೊನ್ನೆ ಸುತ್ತಿದರೆ, ಉಳಿದ ಇಬ್ಬರುತಲಾ ಐದು ರನ್‌ ಗಳಿಸಿದರು.

ಭಾರತ ಪರ ನಾಯಕ ನಿಶಾಂತ್‌ ಸಿಂಧು ನಾಲ್ಕು ವಿಕೆಟ್‌ ಗಳಿಸಿದರೆ, ರಾಜವರ್ಧನ್‌ ಹಂಗರಗೇಕರ್‌2 ಮತ್ತು ವಾಸು ವತ್ಸ್‌, ವಿಕ್ಕಿ ಓಸ್ವಾಲ್‌ ತಲಾ ಒಂದು ವಿಕೆಟ್‌ ಕಿತ್ತರು.

ಧವನ್‌ ದಾಖಲೆ ಮುರಿದಬಾವಾ​
ಈ ಪಂದ್ಯದಲ್ಲಿ ಅಜೇಯ 162 ರನ್‌ ಕಲೆಹಾಕಿದ ರಾಜ್‌ ಬಾವಾ, 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಇನಿಂಗ್ಸ್‌ವೊಂದರಲ್ಲಿ ಭಾರತ ಪರ ವೈಯಕ್ತಿಕ ಗರಿಷ್ಠ ರನ್‌ ಗಳಿಸಿದ ಸಾಧನೆ ಮಾಡಿದರು.

ಇದಕ್ಕೂ ಮೊದಲು ಈ ದಾಖಲೆ ಶಿಖರ್‌ ಧವನ್‌ ಅವರ ಹೆಸರಿನಲ್ಲಿತ್ತು.ಧವನ್‌, 2004ರಲ್ಲಿ ಕೀನ್ಯಾ ವಿರುದ್ಧದ ಪಂದ್ಯದಲ್ಲಿ155 ರನ್‌ ಬಾರಿಸಿದ್ದರು.

ಕ್ವಾರ್ಟರ್‌ಫೈನಲ್‌ನಲ್ಲಿ ಬಾಂಗ್ಲಾ ಎದುರಾಳಿ
ಟೂರ್ನಿಯಲ್ಲಿ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ, ಆಡಿರುವ ಮೂರೂ ಪಂದ್ಯಗಳಲ್ಲಿ ಜಯದ ನಗೆ ಬೀರಿ ಟೇಬಲ್‌ ಟಾಪರ್‌ ಆಗಿದೆ. ಅತ್ತ, 'ಎ' ಗುಂಪಿನಲ್ಲಿರುವ ಬಾಂಗ್ಲಾದೇಶ ತಂಡ ಆಡಿರುವ ಮೂರುಪಂದ್ಯಗಳಲ್ಲಿ ಎರಡು ಜಯ ಸಾಧಿಸಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ.

ಈ ಎರಡೂ ತಂಡಗಳು ಜನವರಿ29ರಂದು ನಡೆಯುವ ಕ್ವಾರ್ಟರ್‌ಫೈನಲ್‌ ಸೆಣಸಾಟದಲ್ಲಿ ಮುಖಾಮುಖಿಯಾಗಲಿವೆ.

2020ರ ಟೂರ್ನಿಯಲ್ಲಿ ಪ್ರಿಯಂ ಗರ್ಗ್‌ ನೇತೃತ್ವದಲ್ಲಿ ಕಣಕ್ಕಿಳಿದಿದ್ದಭಾರತ ತಂಡವನ್ನು ಫೈನಲ್‌ನಲ್ಲಿ ಮಣಿಸಿದ್ದ ಬಾಂಗ್ಲಾ ತಂಡ, ಚಾಂಪಿಯನ್‌ ಆಗಿತ್ತು. ಹೀಗಾಗಿ ಕ್ವಾರ್ಟರ್‌ಫೈನಲ್‌ ಪಂದ್ಯ ಕ್ರಿಕೆಟ್‌ ಪ್ರಿಯರ ಗಮನ ಸೆಳೆದಿದೆ.

ಭಾರತ ತಂಡದ ನಾಯಕ ಯಶ್‌ ಧುಳ್‌ ಸೇರಿದಂತೆ ಕೆಲ ಆಟಗಾರರಿಗೆ ಕೋವಿಡ್‌ ದೃಢಪಟ್ಟಿದೆ. ಆದಾಗ್ಯೂ ತಂಡದ ಇತರ ಆಟಗಾರರಿಂದ ಉತ್ತಮ ಪ್ರದರ್ಶನ ಮೂಡಿಬರುತ್ತಿರುವುದು ಸಮಾಧಾನದ ಸಂಗತಿ. ಉಗಾಂಡ ವಿರುದ್ಧದ ಪಂದ್ಯದಲ್ಲಿ ಧುಳ್‌ ಬದಲುನಿಶಾಂತ್‌ ಸಿಂಧು ತಂಡ ಮುನ್ನಡೆಸಿದ್ದರು.

ಭಾರತ ತಂಡ, 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಇದುವರೆಗೆ ನಾಲ್ಕು ಬಾರಿ ಚಾಂಪಿಯನ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT