ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ಫೈನಲ್ ಪಂದ್ಯವನ್ನು ಜಮ್ಮುವಿನಲ್ಲಿ ಆಡಲಿದೆ.
ಫೆಬ್ರುವರಿ 20ರಿಂದ 24ರವರೆಗೆ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ತಂಡವು ಸಿ ಗುಂಪಿನಿಂದ ಅರ್ಹತೆ ಪಡೆದಿರುವ ಜಮ್ಮು–ಕಾಶ್ಮೀರ ತಂಡವನ್ನು ಎದುರಿಸಲಿದೆ. ಗಾಂಧಿ ಸ್ಮಾರಕ ವಿಜ್ಞಾನ ಕಾಲೇಜು ಕ್ರೀಡಾಂಗಣದಲ್ಲಿ ಪಂದ್ಯವು ನಡೆಯಲಿದೆ. ಲೀಗ್ ಹಂತದಲ್ಲಿ ಈ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳು ನಡೆದಿವೆ.
ಕರ್ನಾಟಕ ತಂಡವು ಎ–ಬಿ ಜಂಟಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದು ಎಂಟರ ಘಟ್ಟಕ್ಕೆ ಅರ್ಹತೆ ಪಡೆದಿದೆ ತಂಡವು ಮಂಗಳವಾರ ಬೆಂಗಳೂರಿನಿಂದ ಜಮ್ಮುವಿಗೆ ಪ್ರಯಾಣ ಮಾಡಲಿದೆ.
ಜಮ್ಮು–ಕಾಶ್ಮೀರದಲ್ಲಿ ಸದ್ಯ ಕಾನೂನು–ಸುವ್ಯವಸ್ಥೆ ಪರಿಸ್ಥಿತಿಯು ಚೆನ್ನಾಗಿರದ ಕಾರಣ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಶನಿವಾರ ಮನವಿ ಮಾಡಿತ್ತು. ಆದರೆ, ಬಿಸಿಸಿಐ ಇದಕ್ಕೆ ಸಮ್ಮತಿಸಿಲ್ಲ.
‘ನಮ್ಮ ತಂಡವು ಜಮ್ಮುವಿನಲ್ಲಿಆಡಲಿದೆ. ಇದೇ 18ರಂದು ಜಮ್ಮುವಿಗೆ ತೆರಳುವುದು’ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.