ಮುಂಬೈ: ತನ್ನ ತವರಿನಂಗಳದಲ್ಲಿ ಆಡಿದ ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಮುಂಬೈ ರಣಜಿ ತಂಡದ ಆಟಗಾರರೊಂದಿಗೆ ಮಂಗಳವಾರ ಭಾರತ ತಂಡದ ಆಟಗಾರ ರೋಹಿತ್ ಶರ್ಮಾ ಚರ್ಚೆ ನಡೆಸಿದರು.
ಮುಂಬೈ ತಂಡವು ಈಚೆಗೆ ರೈಲ್ವೆಸ್ ವಿರುದ್ಧ 10 ವಿಕೆಟ್ಗಳಿಂದ ಮತ್ತು ಕರ್ನಾಟಕದ ಎದುರು ಐದು ವಿಕೆಟ್ಗಳಿಂದ ಸೋತಿತ್ತು.
‘ಸೋಲುಗಳಿಂದಾಗಿ ಹತಾಶರಾಗಿರುವ ಆಟಗಾರರ ಮನೋಬಲ ಹೆಚ್ಚಿಸುವಂತಹ ಮಾತುಗಳನ್ನು ರೋಹಿತ್ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಕೂಡ ಚರ್ಚಿಸಿದರು’ ಎಂದು ತಂಡದ ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಮುಂಬೈ ತಂಡದ ಕೋಚ್ ವಿನಾಯಕ ಸಾಮಂತ್, ಬೌಲಿಂಗ್ ಕೋಚ್ ಪ್ರದೀಪ್ ಸುಂದರಂ ಮತ್ತು ಮ್ಯಾನೇಜರ್ ಅಜಿಂಕ್ಯ ನಾಯಕ್ ಹಾಜರಿದ್ದರು.
ಭಾರತ ಮತ್ತು ಶ್ರೀಲಂಕಾ ನಡುವಣದ ಟ್ವೆಂಟಿ–20 ಕ್ರಿಕೆಟ್ ಸರಣಿಯಿಂದ ರೋಹಿತ್ ವಿಶ್ರಾಂತಿ ಪಡೆದಿದ್ದಾರೆ. ಅವರು ಶನಿವಾರ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದಿದ್ದ ಮುಂಬೈ ಮತ್ತು ಕರ್ನಾಟಕ ಪಂದ್ಯದ ದಿನದಾಟವನ್ನು ನೋಡಿದ್ದರು.