ಸಿಡ್ನಿ: ‘ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಕೊರೊನಾ ಬಿಕ್ಕಟ್ಟಿನ ಕಾರಣ ಮುಂದೂಡಿದರೆ, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಆಡುತ್ತೇನೆ’ ಎಂದು ಆಸ್ಟ್ರೇಲಿಯಾದ ಆಟಗಾರ ಸ್ಟೀವ್ ಸ್ಮಿತ್ ತಿಳಿಸಿದ್ದಾರೆ.
ಅಕ್ಟೋಬರ್–ನವೆಂಬರ್ನಲ್ಲಿ ಆಯೋಜನೆಯಾಗಿರುವ ವಿಶ್ವಕಪ್ ಟೂರ್ನಿಯನ್ನು ಮುಂದಕ್ಕೆ ಹಾಕುವಂತೆ ಕ್ರಿಕೆಟ್ ಆಸ್ಟ್ರೇಲಿಯಾವು (ಸಿಎ) ಐಸಿಸಿಗೆ ಪತ್ರ ಬರೆದಿದೆ ಎನ್ನಲಾಗಿದೆ. ಇದೇ ತಿಂಗಳ 10ರಂದು ನಡೆಯುವ ಸಭೆಯಲ್ಲಿ ಐಸಿಸಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಒಂದೊಮ್ಮೆ ವಿಶ್ವಕಪ್ ಮುಂದೂಡಲ್ಪಟ್ಟರೆ ಸೆಪ್ಟೆಂಬರ್–ಅಕ್ಟೋಬರ್ನಲ್ಲಿ 13ನೇ ಆವೃತ್ತಿಯ ಐಪಿಎಲ್ ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉತ್ಸುಕವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
‘ವಿಶ್ವಕಪ್ನಂತಹ ಮಹತ್ವದ ಟೂರ್ನಿಯಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದಕ್ಕೆ ಎಲ್ಲಾ ಆಟಗಾರರು ಮೊದಲ ಆದ್ಯತೆ ನೀಡುತ್ತಾರೆ. ನಾನೂ ಅದರಿಂದ ಹೊರತಾಗಿಲ್ಲ. ಒಂದೊಮ್ಮೆ ವಿಶ್ವಕಪ್ ನಡೆಯದಿದ್ದರೆ ಐಪಿಎಲ್ನಲ್ಲಿ ಆಡುತ್ತೇನೆ. ಐಪಿಎಲ್ ಕೂಡ ಮಹತ್ವದ ಲೀಗ್ ಆಗಿದೆ’ ಎಂದು ಅವರು ನುಡಿದಿದ್ದಾರೆ.
ಐಸಿಸಿಯು ಚೆಂಡಿನ ಹೊಳಪಿಗಾಗಿ ಎಂಜಲು ಹಚ್ಚುವುದನ್ನು ನಿಷೇಧಿಸಲು ಚಿಂತಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸ್ಮಿತ್ ‘ಒಂದೊಮ್ಮೆ ಹಳೆಯ ಪದ್ಧತಿಗೆ ತಿಲಾಂಜಲಿ ಇಟ್ಟರೆ, ಪರ್ಯಾಯ ಮಾರ್ಗ ಕಂಡುಕೊಳ್ಳಲು ಬೌಲರ್ಗಳು ಪ್ರಯಾಸ ಪಡಬೇಕಾಗುತ್ತದೆ’ ಎಂದಿದ್ದಾರೆ.
ಸ್ಮಿತ್ ಅವರು ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಬೇಕಿದೆ.