ಮುಂಬೈ: ಕ್ರೀಡೆಯು ಮೈದಾನದಲ್ಲಿನ ಪ್ರದರ್ಶನವನ್ನು ಮಾತ್ರ ಗುರುತಿಸುತ್ತದೆ, ಕ್ರೀಡಾಪಟುವಿನ ಹಿನ್ನೆಲೆಯನ್ನಲ್ಲ ಎಂದು ಭಾರತ ಕ್ರಿಕೆಟ್ನ ಐಕಾನ್ ಹಾಗೂ ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗಷ್ಟೇ ಐಪಿಎಲ್ 2021ನೇ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖರೀದಿಸಿತ್ತು. ಇದರ ವಿರುದ್ಧ ವ್ಯಾಪಕ ವಿಮರ್ಶೆ ಉಂಟಾಗಿತ್ತಲ್ಲದೆ ಪಕ್ಷಪಾತ ಧೋರಣೆಯನ್ನು ಟೀಕಿಸಲಾಗಿತ್ತು.
ನಾವು ಡ್ರೆಸ್ಸಿಂಗ್ ಕೋಣೆಗೆ ಪ್ರವೇಶಿಸಿದಾಗ ನೀವು ಎಲ್ಲಿಂದ ಬಂದಿದ್ದೀರಿ, ದೇಶದ ಯಾವ ಭಾಗ ಅಥವಾ ಎಲ್ಲಿಗೆ ಸೇರಿದವರು ಎಂಬುದು ಮುಖ್ಯವೆನಿಸುವುದಿಲ್ಲ. ಎಲ್ಲರಿಗೂ ಸಮಾನವಾದ ಕ್ಷೇತ್ರ ಇದಾಗಿದೆ ಎಂದು ಸಚಿನ್ ತೆಂಡೂಲ್ಕರ್ ವಿವರಿಸಿದರು.
ಮೈದಾನದಲ್ಲಿ ನಿಮ್ಮ ಸಾಧನೆಯನ್ನು ಹೊರತುಪಡಿಸಿ ಯಾವುದನ್ನು ಗುರುತಿಸಲಾಗುವುದಿಲ್ಲ ಎಂದು ಇ-ಕಲಿಕಾ ಫ್ಲ್ಯಾಟ್ಫಾರ್ಮ್ ಅನ್ಅಕಾಡೆಮಿಯ ಬ್ರಾಂಡ್ ಅಂಬಾಸಿಡರ್ ಆಗಿ ಹೆಸರಿಸಲ್ಪಟ್ಟ ಬಳಿಕ ವರ್ಚ್ಯುವಲ್ ಸಂವಾದದಲ್ಲಿ ಸಚಿನ್ ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಹಿಂಬಾಲಿಸಲು ಸಚಿನ್ ತೆಂಡೂಲ್ಕರ್ ಸಲಹೆ ಮಾಡಿದ್ದು, ಇದಕ್ಕಾಗಿ ಹೆಚ್ಚಿನ ಪ್ರಯತ್ನ ಮಾಡುವಂತೆ ತಿಳಿಸಿದರು. ಅಲ್ಲದೆ ವಿಭಿನ್ನ ಕೋಚ್ಗಳ ಮಾರ್ಗದರ್ಶನವನ್ನು ಪಡೆಯುವಂತೆ ತಿಳಿಸಿದರು.
ನಿಮ್ಮ ಕನಸನ್ನು ಹಿಂಬಾಲಿಸುವುದನ್ನು ಮುಂದುವರಿಸಿ. ಕನಸುಗಳು ನನಸಾಗಲಿದೆ. ಅನೇಕ ಬಾರಿ ಗುರಿ ತಲುಪಲು ಅಸಾಧ್ಯ ಎಂದು ನಾವು ಭಾವಿಸುತ್ತೇವೆ. ಆದರೆ ಎಂದಿಗೂ ಅದುವೇ ಕೊನೆಯಲ್ಲ. ಹಾಗಾಗಿ ಗುರಿ ತಲುಪಲು ಹೆಚ್ಚುವರಿ ಪ್ರಯತ್ನವನ್ನು ಮಾಡಬೇಕು. ಖಂಡಿತವಾಗಿಯೂ ಗುರಿ ಮುಟ್ಟುವಿರಿ ಎಂದು 47ರ ಹರೆಯದ ಸಚಿನ್ ಹೇಳಿದರು.