ಹೈದರಾಬಾದ್: ಅಮೋಘ ಆರಂಭದ ನಂತರ ವಿಕೆಟ್ಗಳು ನಿರಂತರವಾಗಿ ಉರುಳಿದವು. ಸುಲಭ ಜಯ ಗಳಿಸುವ ಅವಕಾಶವನ್ನು ಆತಿಥೇಯರು ಕೈಚೆಲ್ಲಿದರು. ಇಲ್ಲಿನ ರಾಜೀವಗಾಂಧಿಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ಎದುರು 39 ರನ್ಗಳಿಂದ ಗೆದ್ದಿತು.
156 ರನ್ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಸನ್ರೈಸರ್ಸ್ಗೆ ಡೇವಿಡ್ ವಾರ್ನರ್ (51; 47 ಎಸೆತ, 1 ಸಿಕ್ಸರ್, 3 ಬೌಂಡರಿ) ಮತ್ತು ಜಾನಿ ಬೇಸ್ಟೊ (41; 31 ಎ, 1 ಸಿ, 5 ಬೌಂ) ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ಇವರಿಬ್ಬರು 72 ರನ್ ಸೇರಿಸಿದರು. ಹೀಗಾಗಿ ತಂಡ ಸುಲಭವಾಗಿ ಜಯ ಗಳಿಸುವ ಭರವಸೆ ಮೂಡಿತು. 10ನೇ ಓವರ್ನಲ್ಲಿ ಈ ಜೊತೆಯಾಟ ಮುರಿದು ಬಿದ್ದ ನಂತರ ತಂಡ ದಿಢೀರ್ ಪತನ ಕಂಡಿತು. ಕಗಿಸೊ ರಬಾಡ, ಕೀಮೊ ಪೌಲ್ ಮತ್ತು ಕ್ರಿಸ್ ಮಾರಿಸ್ ವಿಕೆಟ್ಗಳನ್ನು ಉರುಳಿಸಿ ಸಂಭ್ರಮಿಸಿದರು. ಕೊನೆಯ ಒಂಬತ್ತು ಮಂದಿ ಎರಡಂಕಿ ಮೊತ್ತ ದಾಟಲಾಗದೆ ವಾಪಸಾದರು. 44 ರನ್ಗಳಿಗೆ ತಂಡ ಒಂಬತ್ತು ವಿಕೆಟ್ಗಳನ್ನು ಕಳೆದುಕೊಂಡಿತು.
ಭುವಿ–ಖಲೀಲ್ ಪರಿಣಾಮಕಾರಿ ದಾಳಿ: ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ಗೆ ಮಧ್ಯಮ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಖಲೀಲ್ ಅಹಮ್ಮದ್ ಪೆಟ್ಟು ನೀಡಿದರು. ಸ್ಫೋಟಕ ಬ್ಯಾಟ್ಸ್ಮನ್ ಪೃಥ್ವಿ ಶಾ ಆವರನ್ನು ತಂಡ ಎರಡನೇ ಓವರ್ನಲ್ಲಿಯೇ ಕಳೆದುಕೊಂಡಿತು. ನಾಲ್ಕನೇ ಓವರ್ನಲ್ಲಿ ಶಿಖರ್ ಧವನ್ ಕೂಡ ವಾಪಸಾದರು.
ಆದರೆ, ಕಾಲಿನ್ ಮನ್ರೊ ನಾಯಕ ಶ್ರೇಯಸ್ ಅಯ್ಯರ್ ತಿರುಗೇಟು ನೀಡಿ 49 ರನ್ಗಳ ಜೊತೆಯಾಟ ಆಡಿದರು. ನಂತರ ಸನ್ರೈಸರ್ಸ್ ಬೌಲರ್ಗಳು ಹಿಡಿತ ಸಾಧಿಸಿದರು. ಈ ಸಂದರ್ಭದಲ್ಲಿ ಜೊತೆಗೂಡಿದ ಶ್ರೇಯಸ್ ಮತ್ತು ರಿಷಭ್ ಪಂತ್ 56 ರನ್ ಸೇರಿಸಿದರು. ಇದರಿಂದಾಗಿ ತಂಡ ನೂರರ ಗಡಿ ದಾಟಿತು. ಇವರಿಬ್ಬರು ಔಟಾದ ನಂತರ ತಂಡ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿತು.