ಮುಂಬೈ: ನಾನು ಬೌಲಿಂಗ್ ಮಾಡಲು ಫಿಟ್ ಆಗಿದ್ದೇನೆಯೇ ಎಂಬುದನ್ನು ಮೊದಲು ದೃಢ ಪಡಿಸಿಕೊಳ್ಳಬೇಕು. ನಾನು ಬೌಲಿಂಗ್ ಮಾಡಲು ಸಮರ್ಥನಾದರೆ ತಂಡಕ್ಕೆ ಸಮತೋಲನ ಬಂದಂತಾಗುತ್ತದೆ ಎಂದು ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
ಅಕ್ಟೋಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ತಂಡ ಸೇರಲು ಸಾಕಷ್ಟು ಪೂರ್ವ ತಯಾರಿಯನ್ನುಹಾರ್ದಿಕ್ ಪಾಂಡ್ಯ ನಡೆಸಿದ್ದಾರೆ. 2019ರ ಏಷ್ಯಾ ಕಪ್ ವೇಳೆ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ಹಾರ್ದಿಕ್ ಪಾಂಡ್ಯ ನಿರಂತರ ಬೌಲಿಂಗ್ ಅಭ್ಯಾಸದಿಂದ ದೂರ ಉಳಿದಿದ್ದರು.
ಐಪಿಎಲ್ನಿಂದ ಬೌಲಿಂಗ್ ಮಾಡಲು ಶುರು ಮಾಡಿದ್ದೇನೆ. ನನ್ನ ಗುರಿ ವಿಶ್ವ ಕಪ್ನಲ್ಲಿ ಆಡುವುದಾಗಿದೆ ಎಂದು 'ಟೈಮ್ಸ್ ಆಫ್ ಇಂಡಿಯಾದ ಸ್ಪೋರ್ಟ್ಸ್ಕಾಸ್ಟ್'ಗೆ ಹೇಳಿದ್ದಾರೆ.
ನಾನು ಬೌಲಿಂಗ್ನಲ್ಲಿ ಚಾಣಾಕ್ಯತೆಯನ್ನು ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ವಿಶ್ವಕಪ್ ಅನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದಿಲ್ಲ ಎಂಬ ನಂಬಿಕೆಯಿದೆ. ನಾನೆಷ್ಟು ಫಿಟ್ ಆಗಿದ್ದೇನೆ ಎಂಬುದರ ಮೇಲೆ ಆಡುವುದು ಬಿಡುವುದು ನಿಂತಿದೆ. ಸರ್ಜರಿ ಚಿಕಿತ್ಸೆಗೆ ಒಳಪಟ್ಟ ನಂತರವೂ ನನ್ನ ಬೌಲಿಂಗ್ನಲ್ಲಿ ಅದೇ ವೇಗವನ್ನು ಕಾಯ್ದುಕೊಂಡಿದ್ದೇನೆ. ನನ್ನ ಬೌಲಿಂಗ್ ನನ್ನ ಫಿಟ್ನೆಸ್ ಮೇಲೆ ಅವಲಂಬಿತವಾಗಿದೆ. ನಾನು ಹೆಚ್ಚು ಫಿಟ್ ಆದಂತೆ ಹೆಚ್ಚು ವೇಗವಾಗಿ ಬೌಲಿಂಗ್ ಮಾಡುತ್ತೇನೆ. ನಾನೊಬ್ಬ ವೇಗದ ಬೌಲರ್ ಆಗಿರುವುದರಿಂದ ಗಾಯದ ಸಮಸ್ಯೆಗಳು ಉಂಟಾಗುವುದು ಸಾಮಾನ್ಯ. ನಾನು ಅದಕ್ಕೆ ಹೊಂದಿಕೊಂಡಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ವಿವರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ಐಪಿಎಲ್ನಲ್ಲಿ ಮೈದಾನಕ್ಕೆ ಇಳಿದ ಹಾರ್ದಿಕ್ ಪಾಂಡ್ಯ ಭುಜದ ನೋವಿನ ಕಾರಣ ಎಲ್ಲ ಏಳು ಪಂದ್ಯಗಳಲ್ಲು ಬೌಲಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಮಾರ್ಚ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಗದಿನ ಪಂದ್ಯದಲ್ಲಿ 9 ಓವರ್ಗಳನ್ನು ಎಸೆದಿದ್ದರು. 5 ಟಿ20 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಪಾಂಡ್ಯ ಒಟ್ಟು 17 ಓವರ್ಗಳನ್ನು ಎಸೆದಿದ್ದಾರೆ.
ಜೂನ್ 18ಕ್ಕೆ ಆರಂಭಗೊಳ್ಳಲಿರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯ ಮತ್ತು ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಪಾಂಡ್ಯ ಆಯ್ಕೆಯಾಗಿಲ್ಲ. ಜುಲೈ 13ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ಪ್ರವಾಸದಲ್ಲಿ ಪಾಂಡ್ಯಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ. ಶ್ರೀಲಂಕಾ ವಿರುದ್ಧ 3 ಏಕದಿನ ಹಾಗೂ 3 ಟಿ20 ಪಂದ್ಯಗಳು ನಡೆಯಲಿವೆ.
ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಗೊಳ್ಳುವ ಮೊದಲು ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಲು ಯೋಚಿಸಿದ್ದೆ. ಆ ಸಂದರ್ಭ ಏನೂ ಮಾಡದೆ ಕುಟುಂಬ ಸದಸ್ಯರ ಜೊತೆ ಸಮಯ ಕಳೆಯಬೇಕೆಂದಿದ್ದೆ. ನಾನು ಮೈದಾನಕ್ಕೆ ಇಳಿದರೆ 50% ನಲ್ಲಿ ಆಡುವುದಿಲ್ಲ. 100% ನೊಂದಿಗೆ ಆಡುತ್ತೇನೆ. ಸುಮಾರು ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ಅಭ್ಯಾಸ ನಡೆಸುತ್ತಿದ್ದೇನೆ. ಕೋವಿಡ್ನಿಂದ ಗುಣಮುಖನಾಗಿದ್ದೇನೆ. ನಾನೀಗ ಫಿಟ್ ಆಗಿರಬೇಕು. ಶ್ರೀಲಂಕಾ ಪ್ರವಾಸಕ್ಕೆ ಇಂದಿನಿಂದಲೇ (ಶನಿವಾರ) ಅಭ್ಯಾಸ ಆರಂಭಿಸಿದ್ದೇನೆ. ಇದು ವಿಶ್ವ ಕಪ್ಗೆ ನಡೆಸುತ್ತಿರುವ ಪೂರ್ವ ತಯಾರಿಯೂ ಹೌದು ಎಂದು ಹಾರ್ದಿಕ್ ಪಾಂಡ್ಯ ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.