ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವದಿಂದ ನಿರ್ಗಮಿಸಲು ಕೊಹ್ಲಿ ನಿರ್ಧಾರ: ಟಿ20 ಸಾರಥ್ಯ ರೋಹಿತ್ ಶರ್ಮಾಗೆ?

Last Updated 16 ಸೆಪ್ಟೆಂಬರ್ 2021, 17:13 IST
ಅಕ್ಷರ ಗಾತ್ರ

ದುಬೈ: ಭಾರತ ಟ್ವೆಂಟಿ–20 ಕ್ರಿಕೆಟ್ ತಂಡದ ನಾಯಕತ್ವವನ್ನು ಬಿಟ್ಟುಕೊಟ್ಟು ಬ್ಯಾಟಿಂಗ್‌ನತ್ತ ಗಮನ ಹರಿಸಲು ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ.

ಮುಂದಿನ ತಿಂಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಂತರ ಅವರು ನಾಯಕತ್ವ ಬಿಡುವುದಾಗಿ ಗುರುವಾರ ಸಂಜೆ ಮಾಡಿರುವ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ನಾಯಕನಾಗಿ ಮತ್ತು ಆಟಗಾರನಾಗಿ ತಂಡಕ್ಕೆ ನನ್ನೆಲ್ಲ ಸಾಮರ್ಥ್ಯವನ್ನು ಧಾರೆಯೆರೆದಿದ್ದೇನೆ. ಇನ್ನು ಮುಂದೆಯೂ ಆಟಗಾರನಾಗಿ ಕಾಣಿಕ ನೀಡುತ್ತೇನೆ. ಕೋಚ್ ರವಿಶಾಸ್ತ್ರಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಈಕುರಿತು ಚರ್ಚಿಸಿ ನಿರ್ಧಾರ ಕೈಗೊಂಡಿದ್ದೇನೆ’ ಎಂದೂ ಕೊಹ್ಲಿ ಹೇಳಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರಿಗೆ ನಾಯಕತ್ವದ ಪಟ್ಟ ಕಟ್ಟುವುದು ಬಹುತೇಕ ಖಚಿತವಾಗಿದೆ.

‘ಟಿ20 ತಂಡದನಾಯಕತ್ವದಿಂದಕೆಳಗಿಳಿಯಲು ನಿರ್ಧರಿಸಿದ್ದೇನೆ. ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ನಂತರ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ತಂಡಗಳಿಗೆ ಮಾತ್ರ ನಾಯಕನಾಗಿ ಮುಂದುವರಿಯುತ್ತೇನೆ. ಚುಟುಕು ಕ್ರಿಕೆಟ್‌ ತಂಡದಲ್ಲಿ ಬ್ಯಾಟ್ಸ್‌ಮನ್ ಆಗಿ ಉತ್ತಮ ಕಾಣಿಕೆ ಕೊಡುವ ಪ್ರಯತ್ನ ಮಾಡುತ್ತೇನೆ’ ಎಂದು 32 ವರ್ಷದ ವಿರಾಟ್ ಬರೆದಿದ್ದಾರೆ.

‘ನಮ್ಮ ಮೇಲಿರುವ ಕೆಲಸದೊತ್ತಡವನ್ನು ಅರಿತುಕೊಳ್ಳುವುದು ಮುಖ್ಯ. ಕಳೆದ 8–9 ವರ್ಷಗಳಿಂದ ಎಲ್ಲ ಮೂರು ಮಾದರಿಗಳಲ್ಲಿ ಆಡುವ ಮತ್ತು ಐದಾರು ವರ್ಷಗಳಿಂದ ನಾಯಕತ್ವ ವಹಿಸುವ ಒತ್ತಡವನ್ನು ನಿಭಾಯಿಸಿದ್ದೇನೆ. ಆದರೆ ಈಗ ನನಗೆ ಸ್ವಲ್ಪ ಬಿಡುವಿನ ಅವಕಾಶ ನೀಡಬೇಕಿದೆ. ಆದ್ದರಿಂದ ಚುಟುಕು ಕ್ರಿಕೆಟ್ ನಾಯಕತ್ವ ಬಿಟ್ಟುಕೊಡುತ್ತಿದ್ದೇನೆ’ ಎಂದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಯಶಸ್ವಿ ನಾಯಕರೆನಿಸಿಕೊಂಡಿರುವ ರೋಹಿತ್ ಶರ್ಮಾ ಅವರನ್ನು ಸೀಮಿತ ಓವರ್‌ಗಳ ಕ್ರಿಕೆಟ್ ತಂಡಗಳಿಗೆ ನಾಯಕರನ್ನಾಗಿ ಮಾಡುವ ಕುರಿತು ಮಾತುಗಳು ಕೆಲವು ತಿಂಗಳುಗಳಿಂದ ಕೇಳಿ ಬರುತ್ತಿದ್ದವು. ಅದರಲ್ಲಿ ಕಳೆದ ಕೆಲವು ತಿಂಗಳುಗಳಿಂದ ವಿರಾಟ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಇ ಬ್ಯಾಟಿಂಗ್‌ನಲ್ಲಿ ಹೆಚ್ಚು ಯಶಸ್ಸು ಕಂಡಿಲ್ಲ. ಅಲ್ಲದೇ ಐಸಿಸಿಯ ಟ್ರೋಫಿಗಳನ್ನು ಜಯಿಸುವಲ್ಲಿಯೂ ವಿರಾಟ್ ನಾಯಕತ್ವ ಸಫಲವಾಗಿಲ್ಲ ಎಂಬ ಚರ್ಚೆಗಳು ಕೂಡ ನಡೆದಿದ್ದವು.

‘ಕೆಲಸದೊತ್ತಡ ನಿರ್ವಹಣೆಯ ಕುರಿತು ಆಟಗಾರರಿಗೆ ಸ್ಪಷ್ಟ ಮಾರ್ಗಸೂಚಿಯನ್ನು ನೀಡಲಾಗಿದೆ. ಅದರಿಂದಾಗಿ ತಂಡದ ಕಾರ್ಯನಿರ್ವಹಣೆ ಚೆನ್ನಾಗಿರುತ್ತದೆ. ಇದೀಗ ವಿರಾಟ್ ಕೊಹ್ಲಿ ಅವರು ಟಿ20
ತಂಡದನಾಯಕತ್ವದಿಂದಕೆಳಗಿಳಿಯಲು ನಿರ್ಧರಿಸಿದ್ದಾರೆ. ಅವರೊಂದಿಗೆ ಕಳೆದ ಆರು ತಿಂಗಳುಗಳಿಂದ ತಂಡದ ನಾಯಕತ್ವದ ಕುರಿತು ಮಾತುಕತೆ ನಡೆಸಿದ್ದೇನೆ. ವಿರಾಟ್ ತಂಡದಲ್ಲಿ ಆಟಗಾರನಾಗಿ ಮುಂದುವರಿಯಲಿದ್ದು, ಉತ್ತಮ ಕಾಣಿಕೆ ನೀಡುವ ವಿಶ್ವಾಸವಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT