ಅಹಮದಾಬಾದ್: ಕೊನೆಯ ಓವರ್ನಲ್ಲಿ ರವೀಂದ್ರ ಜಡೇಜಾ ಮಾಡಿದ ಮ್ಯಾಜಿಕ್ನಿಂದ ಈ ಸಾರಿಯ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ಮಣಿಸಿ ಚಾಂಪಿಯನ್ ಆಯಿತು.
ಈ ಮೂಲಕ ಕ್ರಿಕೆಟ್ ಅಭಿಮಾನಿಗಳ ಭಾರಿ ಮೆಚ್ಚುಗೆಗೆ ಪಾತ್ರವಾಗಿರುವ ಗುಜರಾತ್ ಮೂಲದ ರವೀಂದ್ರ ಜಡೇಜಾ ಅವರು ಈ ಗೆಲುವನ್ನು ನಾಯಕ ಮಹೇಂದ್ರ ಸಿಂಗ್ ಧೋನಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ ಎಎನ್ಐ ಟ್ವೀಟ್ ಮಾಡಿದೆ.
ನನಗೆ ಇದೊಂದು ಅವಿಸ್ಮರಣೀಯ ಪಂದ್ಯ. ಏಕೆಂದರೆ ನಾನು ಮೂಲತಃ ಗುಜರಾತ್ನವನು, ಗುಜರಾತ್ನ ಕ್ರೀಡಾಂಗಣದಲ್ಲಿ ನನ್ನ ತವರುಮನೆಯ ಸಾವಿರಾರು ಪ್ರೇಕ್ಷಕರು ಗುಜರಾತ್ ಟೈಟನ್ಸ್ ಗೆಲ್ಲಬೇಕೆಂದು ಬಯಸಿದ್ದರು. ಆದರೆ, ನಾನು ನನ್ನ ತಂಡವನ್ನು ಗೆಲ್ಲಿಸಿದ್ದು, ಆ ಮೂಲಕ ಸಿಎಸ್ಕೆ ಅಭಿಮಾನಿಗಳಿಗೆ ಸಂತಸ ನೀಡಿದ್ದು ನನ್ನಲ್ಲಿ ಬೆರಗು ಮೂಡಿಸಿತು. ಇಂತಹ ಅದ್ಭುತ ಗೆಲುವನ್ನು ನನ್ನ ನಾಯಕನಿಗೆ ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯ ಕೊನೆಯ ಎಸೆತದ ವರೆಗೆ ಕುತೂಹಲ ಉಳಿಸಿಡಿತ್ತು.
ನಿನ್ನೆಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್ ತಂಡ, 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214ರನ್ ಗಳಿಸಿತ್ತು. ಮೊದಲ ಇನ್ನಿಂಗ್ಸ್ ನಂತರ ಮಳೆ ಸುರಿದಿದ್ದರಿಂದ ಡಕ್ವರ್ಥ್ ಲೂಯಿಸ್ ನಿಯಮದಂತೆ ಪಂದ್ಯ ಪರಿಷ್ಕತಗೊಂಡಿತ್ತು. ಅದರಂತೆ, ಚೆನ್ನೈಗೆ 15 ಓವರ್ಗಳಲ್ಲಿ 171 ರನ್ಗಳ ಗುರಿ ನಿಗದಿಯಾಯಿತು.
ಸವಾಲಿನ ಮೊತ್ತ ಬೆನ್ನುಹತ್ತಿದ ಚೆನ್ನೈಗೆ ಕಡೇ ಎರಡು ಎಸೆತಗಳಲ್ಲಿ 10 ರನ್ಗಳ ಬೇಕಿತ್ತು. ಆಗ ಬ್ಯಾಟ್ ಬೀಸಿದ ರವೀಂದ್ರ ಜಡೇಜಾ, ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಭಾರಿಸಿ ಚೆನ್ನೈ ತಂಡದ ಗೆಲುವಿಗೆ ಕಾರಣರಾದರು.
ಈ ಟೂರ್ನಿಯಲ್ಲಿ ಜಡೇಜಾ ಅವರು 16 ಪಂದ್ಯಗಳನ್ನು ಆಡಿ, 190 ರನ್ ಕಲೆ ಹಾಕಿದ್ದಾರೆ (ಸರಾಸರಿ 23.75). ಅಷ್ಟೂ ಪಂದ್ಯಗಳಲ್ಲಿ 20 ವಿಕೆಟ್ ಕಿತ್ತು ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು 2018ರಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸತತವಾಗಿ ಆಡುತ್ತಿದ್ದಾರೆ.