ದುಬೈ: ಐಸಿಸಿ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಭಾರತ ಸೋಲು ಅನುಭವಿಸಿದೆ. ಐದು ವರ್ಷಗಳ ಹಿಂದೆಯೇ ಈ ಕುರಿತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿಕೆ ನೀಡಿದ್ದರು.
2016ರ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಗೆಲುವು ದಾಖಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಧೋನಿ ಈ ರೀತಿಯಾಗಿ ಉತ್ತರಿಸಿದ್ದರು.
'ಪಾಕಿಸ್ತಾನ ವಿರುದ್ಧ 11-0 ಅಂತರದಲ್ಲಿ ಗೆದ್ದಿದ್ದೇವೆ ಎಂದು ಹೆಮ್ಮೆಪಟ್ಟುಕೊಳ್ಳುವುದಾದರೆ, ಯಾವತ್ತಾದರೂ ಸೋಲಲಿದೆ ಎಂಬುದು ಕೂಡಾ ವಾಸ್ತವಾಂಶವಾಗಿದೆ. ನಾವು ಇಂದು ಅಥವಾ 10 ವರ್ಷಗಳ ಅಥವಾ 50 ವರ್ಷಗಳ ಬಳಿಕ ಸೋಲಬಹುದು. ಆದರೆ ಖಂಡಿತವಾಗಿಯೂ ಅದು ಸಂಭವಿಸುತ್ತದೆ. ನೀವೂ ಯಾವಾಗಲೂ ಗೆಲ್ಲಲು ಸಾಧ್ಯವಿಲ್ಲ' ಎಂದು ಧೋನಿ ಪ್ರಬುದ್ಧ ಮಾತುಗಳನ್ನು ಆಡಿದ್ದರು.
ದುಬೈನಲ್ಲಿ ಸಾಗುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು. ಈ ಮೂಲಕ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ ಗೆಲುವಿನ ಓಟಕ್ಕೆ ವಿರಾಮ ಬಿದ್ದಿದೆ.
ಪಾಕಿಸ್ತಾನ ವಿರುದ್ಧ ಭಾರತ, ಏಕದಿನ ವಿಶ್ವಕಪ್ನಲ್ಲಿ 7-0 ಹಾಗೂ ಟ್ವೆಂಟಿ-20 ವಿಶ್ವಕಪ್ನಲ್ಲಿ 5-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.