ಬೆಂಗಳೂರು: ಕರ್ನಾಟಕದ ಪುರುಷರ ಮತ್ತು ಮಹಿಳಾ ತಂಡದವರು ಪಂಜಾಬ್ನ ಲುಧಿಯಾನದಲ್ಲಿ ನಡೆಯುತ್ತಿರುವ 70ನೇ ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಮುಗ್ಗರಿಸಿದ್ದಾರೆ.
ಗುರುನಾನಕ್ ದೇವ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪುರುಷರ ವಿಭಾಗದ ಹಣಾಹಣಿಯಲ್ಲಿ ರಾಜ್ಯ ತಂಡ 78–93 ಪಾಯಿಂಟ್ಸ್ನಿಂದ ರೈಲ್ವೇಸ್ ಎದುರು ಸೋತಿತು.
ಕರ್ನಾಟಕ ತಂಡದ ಎಂ.ಹರೀಶ್ 26 ಪಾಯಿಂಟ್ಸ್ ಗಳಿಸಿ ಗಮನ ಸೆಳೆದರು. ಅನಿಲ್ಕುಮಾರ್ (19) ಮತ್ತು ಅರವಿಂದ್ ಆರ್ಮುಗಂ (11) ಅವರೂ ಮಿಂಚಿದರು.
ಮಹಿಳಾ ವಿಭಾಗದ ಎಂಟರ ಘಟ್ಟದ ಪೈಪೋಟಿಯಲ್ಲಿ ಕರ್ನಾಟಕ 44–85 ಪಾಯಿಂಟ್ಸ್ನಿಂದ ರೈಲ್ವೇಸ್ ಎದುರು ಪರಾಭವಗೊಂಡಿತು.
ರಾಜ್ಯ ತಂಡದ ಲೋಪಮುದ್ರ ಮತ್ತು ವಿನಯಾ ಜೋಸೆಫ್ ಅವರು ಕ್ರಮವಾಗಿ 17 ಮತ್ತು 13 ಪಾಯಿಂಟ್ಸ್ ಕಲೆಹಾಕಿದರು.
ಇದಕ್ಕೂ ಮೊದಲು ನಡೆದಿದ್ದ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ರಾಜ್ಯ ತಂಡ 54–47ಯಿಂದ ರಾಜಸ್ಥಾನದ ವಿರುದ್ಧ ಗೆದ್ದಿತ್ತು.