ಬೆಂಗಳೂರು: ಕರ್ನಾಟಕದ ಈಜುಪಟುಗಳು ರಾಷ್ಟ್ರೀಯ ಸಬ್ ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ ನಿರೀಕ್ಷೆಯಂತೆಯೇ ಸಮಗ್ರ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡರು.
ಭುವನೇಶ್ವರದಲ್ಲಿ ಭಾನುವಾರ ಕೊನೆಗೊಂಡ ಕೂಟದಲ್ಲಿ ಕರ್ನಾಟಕ ತಂಡ 50 ಚಿನ್ನ, 47 ಬೆಳ್ಳಿ ಮತ್ತು 27 ಕಂಚಿನ ಪದಕಗಳೊಂದಿಗೆ ಅಗ್ರಸ್ಥಾನ ಪಡೆಯಿತು. 11 ಚಿನ್ನ, 24 ಬೆಳ್ಳಿ ಮತ್ತು 19 ಕಂಚು ಸೇರಿದಂತೆ 54 ಪದಕ ಗೆದ್ದುಕೊಂಡ ಮಹಾರಾಷ್ಟ್ರ ಎರಡನೇ ಸ್ಥಾನ ಗಳಿಸಿತು.
ಕರ್ನಾಟಕದ ಇಶಾನ್ ಮೆಹ್ರಾ (5 ಚಿನ್ನ, 2 ಕೂಟ ದಾಖಲೆ) ಅವರು ಬಾಲಕರ ‘ಗುಂಪು–2’ ರಲ್ಲಿ ಮತ್ತು ತನಿಷಿ ಗುಪ್ತಾ (4 ಚಿನ್ನ, 1 ಬೆಳ್ಳಿ, 3 ಕೂಟ ದಾಖಲೆ) ಬಾಲಕಿಯರ ‘ಗುಂಪು–2’ ರಲ್ಲಿ ‘ಶ್ರೇಷ್ಠ ಈಜುಪಟು’ ಗೌರವ ಪಡೆದುಕೊಂಡರು.
ಅಂತಿಮ ದಿನ ನಡೆದ ಬಾಲಕರ ‘ಗುಂಪು–2‘ರ 200 ಮೀ. ಬ್ಯಾಕ್ಸ್ಟ್ರೋಕ್ ಸ್ಪರ್ಧೆಯಲ್ಲಿ ಕರ್ನಾಟಕದ ವೇದಾಂತ ಎಂ.ವಿ. ಅವರು 2 ನಿ.11.74 ಸೆ.ಗಳೊಂದಿಗೆ ಚಿನ್ನ ಗೆದ್ದು ಹೊಸ ದಾಖಲೆ ನಿರ್ಮಿಸಿದರು. ಆರ್ಯನ್ ಭೋಸಲೆ (2 ನಿ. 11.97 ಸೆ.) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.
ಇದೇ ಗುಂಪಿನ 200 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಟಿ.ಅಕ್ಷಜ್ (2 ನಿ. 1.85 ಸೆ.) ಅವರು ಚಿನ್ನ ಗೆದ್ದರೆ, ಮೋನಿಷ್ ಪಿ.ವಿ. ಕಂಚು ಪಡೆದುಕೊಂಡರು.
ಅಂತಿಮ ದಿನ ಮಿಂಚಿದ ರಾಜ್ಯದ ಬಾಲಕಿಯರು ನಾಲ್ಕು ಚಿನ್ನ ಗೆದ್ದುಕೊಂಡರು. ‘ಗುಂಪು–1’ರ 200 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಹಷಿಕಾ ರಾಮಚಂದ್ರ (2 ನಿ. 8.35 ಸೆ.) ಚಿನ್ನ ಜಯಿಸಿದರೆ, ಶಿರಿನ್ ಅವರು ಮೂರನೇ ಸ್ಥಾನ ಪಡೆದರು.
‘ಗುಂಪು–2’ ರ 200 ಮೀ. ಫ್ರೀಸ್ಟೈಲ್ನಲ್ಲಿ ಧೀನಿಧಿ ದೇಸಿಂಗು (2 ನಿ. 5.62 ಸೆ.) ಮತ್ತು ಶ್ರೀ ಚಾರಣಿ ಅವರು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಜಯಿಸಿದರು.
200 ಮೀ. ಬ್ಯಾಕ್ಸ್ಟ್ರೋಕ್ ಸ್ಪರ್ಧೆಯಲ್ಲಿ ನೈಶಾ (2 ನಿ. 24.71 ಸೆ.) ಅಗ್ರಸ್ಥಾನ ಗಳಿಸಿದರು. 50 ಮೀ. ಬಟರ್ಫ್ಲೈನಲ್ಲಿ ತನಿಷಿ ಗುಪ್ತಾ (28.52 ಸೆ.) ಮತ್ತು ಧೀನಿಧಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದುಕೊಂಡರು.