ನವದೆಹಲಿ: ಪ್ರತಿಷ್ಠಿತ ಇಂಡಿಯಾ ಓಪನ್ 2022 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗವಹಿಸಿದ ಭಾರತದ ಕಿಡಂಬಿ ಶ್ರೀಕಾಂತ್ ಸೇರಿದಂತೆ ಏಳು ಮಂದಿ ಆಟಗಾರರಿಗೆಕೋವಿಡ್ ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಟೂರ್ನಿಯಿಂದಲೇ ನಿರ್ಗಮನದ ಹಾದಿ ಹಿಡಿದಿದ್ದಾರೆ.
ಡಬಲ್ಸ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ರಿತಿಕಾ ರಾಹುಲ್ ಥಕ್ಕರ್, ತ್ರಿಷಾ ಜೌಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಸಿಂಘಿ ಹಾಗೂ ಖುಷಿ ಗುಪ್ತಾ ಕೊರೊನಾ ಸೋಂಕು ತಗುಲಿದ ಇತರೆ ಬ್ಯಾಡ್ಮಿಂಟನ್ ಆಟಗಾರರಾಗಿದ್ದಾರೆ.
ಕೋವಿಡ್ ನಿಯಮಾವಳಿಯಂತೆ ಎಲ್ಲ ಆಟಗಾರರಲ್ಲೂ ಪ್ರತ್ಯೇಕವಾಸದಲ್ಲಿರುವಂತೆ ಸೂಚಿಸಲಾಗಿದೆ. ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಬಳಿಕ ನವದೆಹಲಿಯಿಂದ ತಮ್ಮ ತಮ್ಮ ನಗರಗಳಿಗೆ ಹಿಂತಿರುಗಲು ಅನುಮತಿ ನೀಡಲಾಗುತ್ತದೆ.
ಕ್ರೀಡಾಪಟುಗಳಲ್ಲಿ ಕೋವಿಡ್ ದೃಢಪಟ್ಟಿರುವ ಹೊರತಾಗಿಯೂ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 500 ಚಾಂಪಿಯನ್ಷಿಪ್ ನಿಗದಿತ ವೇಳಾಪಟ್ಟಿಯಂತೆ ಮುಂದುವರಿಸಲು ಸಂಘಟಕರು ನಿರ್ಧರಿಸಿದ್ದಾರೆ.