ನವದೆಹಲಿ: ಕರ್ನಾಟಕದ ಪ್ಯಾರಾ ಅಥ್ಲೀಟ್ ಕೆ.ವೈ. ವೆಂಕಟೇಶ್, ಪಿ.ಟಿ.ಉಷಾ ಅವರ ಕೋಚ್ ಮಾಧವನ್ ನಂಬಿಯಾರ್, ಅನುಭವಿ ಟೇಬಲ್ ಟೆನಿಸ್ ಆಟಗಾರ್ತಿ ಮೌಮಾ ದಾಸ್ ಸೇರಿದಂತೆ ಏಳು ಕ್ರೀಡಾಪಟುಗಳನ್ನು ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಭಾರತ ಮಹಿಳಾ ಬ್ಯಾಸ್ಕೆಟ್ಬಾಲ್ ತಂಡದ ಮಾಜಿ ನಾಯಕಿ ಪಿ.ಅನಿತಾ, ದೂರ ಅಂತರ ಓಟಗಾರ್ತಿ ಸುಧಾ ಸಿಂಗ್, ಮಾಜಿ ಕುಸ್ತಿಪಟು ವೀರೇಂದರ್ ಸಿಂಗ್ ಮತ್ತು ಪರ್ವತಾರೋಹಿ ಅಂಶು ಜನ್ಸೆನ್ಪ ಅವರನ್ನೂ ಆಯ್ಕೆ ಮಾಡಲಾಗಿದೆ.
2005ರ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಪದಕ ಗಳಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಗಳಿಸಿರುವ ವೆಂಕಟೇಶ್ 1994ರಲ್ಲಿ ಜರ್ಮನಿಯ ಬರ್ಲಿನ್ನಲ್ಲಿ ನಡೆದ ಅಂತರರಾಷ್ಟ್ರೀಯ ಪ್ಯಾರಾ ಲಿಂಪಿಕ್ ಸಮಿತಿಯ ಮೊದಲ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡಿದ್ದರು. ಶರತ್ ಕಮಲ್ ನಂತರ ಪದ್ಮಶ್ರೀಗೆ ಪಾತ್ರರಾದ ಎರಡನೇ ಟೇಬಲ್ ಟೆನಿಸ್ ಪಟು ಮೌಮಾ ದಾಸ್. ಸುಧಾ ಅವರು 3000 ಮೀಟರ್ಸ್ ಸ್ಟೀಪಲ್ ಚೇಸ್ನಲ್ಲಿ ಭಾರತವನ್ನು ಸತತ ಎರಡು ಒಲಿಂಪಿಕ್ಸ್ಗಳಲ್ಲಿ (2012 ಮತ್ತು 2016) ಪ್ರತಿನಿಧಿಸಿದ್ದರು.