ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶೆಯ ಮಡುವಿನಲ್ಲಿದ್ದ ಭಾರತ ತಂಡದ ಆಟಗಾರರಿಗೆ ಪ್ರಧಾನಿ ಮೋದಿ ಸಾಂತ್ವನ

Published 21 ನವೆಂಬರ್ 2023, 0:30 IST
Last Updated 21 ನವೆಂಬರ್ 2023, 0:30 IST
ಅಕ್ಷರ ಗಾತ್ರ

ನವದೆಹಲಿ: ಭಾನುವಾರ ರಾತ್ರಿ, ಅಹಮದಾಬಾದಿನಲ್ಲಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಸೋತ ನಂತರ ನಿರಾಶೆಯ ಮಡುವಿನಲ್ಲಿದ್ದ ಭಾರತ ತಂಡದ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನದ ಮಾತುಗಳನ್ನು ಆಡಿ ಧೈರ್ಯ ತುಂಬಿದ್ದಾರೆ.

ಭಾರತ ತಂಡದ ಆಟಗಾರರು ಸೋಲಿನ ಆಘಾತದಿಂದ ಮೌನಕ್ಕೆ ಶರಣಾಗಿದ್ದರು. ಈ ವೇಳೆ ಭಾರತ ತಂಡದ ಡ್ರೆಸಿಂಗ್ ರೂಮ್‌ಗೆ ಭೇಟಿಯಿತ್ತ ಮೋದಿ, ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್‌ ಪಡೆದಿದ್ದ ಮೊಹಮ್ಮದ್ ಶಮಿ ಅವರನ್ನು ಆಲಂಗಿಸಿ ಧೈರ್ಯ ಹೇಳಿದರು. ರವೀಂದ್ರ ಜಡೇಜಾ ಜೊತೆಯೂ ಮಾತನಾಡಿದರು.

ಮೋದಿ ಭೇಟಿ ಕೊಟ್ಟು ಮಾತನಾಡಿದ ದೃಶ್ಯಗಳನ್ನು ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಟೂರ್ನಿಯಲ್ಲಿ ಉತ್ತಮವಾಗಿ ಆಡಿದೆವು. ಫೈನಲ್‌ನಲ್ಲಿ ಸೋತಿದ್ದು, ಎಲ್ಲರೂ ಎದೆಗುಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಡ್ರೆಸಿಂಗ್‌ ರೂಮ್‌ಗೆ ಭೇಟಿ ನೀಡಿದ್ದು ವಿಶೇಷ ಮತ್ತು ಪ್ರೇರಣಾದಾಯಕವಾದುದು’ ಎಂದು ಜಡೇಜಾ ‘ಎಕ್ಸ್‌’ನಲ್ಲಿ ಮೋದಿ ಜೊತೆಗಿನ ಚಿತ್ರ ಹಂಚಿಕೊಂಡಿದ್ದಾರೆ. ಶಮಿ ಅವರೂ ಮೋದಿ ಜೊತೆಗಿನ ಚಿತ್ರವನ್ನು ಸಂದೇಶದೊಡನೆ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮೋದಿ ಅವರೂ ಭಾರತ ತಂಡಕ್ಕೆ ‘ಎಕ್ಸ್‌’ನಲ್ಲಿ ಸಂದೇಶ ನೀಡಿದ್ದಾರೆ. ‘ಪ್ರಿಯ ಟೀಮ್‌ ಇಂಡಿಯಾ, ನಿಮ್ಮ ಪ್ರತಿಭೆ ಮತ್ತು ದೃಢಸಂಕಲ್ಪ
ಅಸಾಧಾರಣವಾದುದು. ತುಂಬಾ ಸ್ಫೂರ್ತಿಯಿಂದ ಆಡಿ, ದೇಶಕ್ಕೆ ಹೆಮ್ಮೆ ಮೂಡಿಸಿದ್ದೀರಿ. ನಾವು ಇಂದು ಮತ್ತು ಎಂದೆಂದೂ ನಿಮ್ಮ ಜೊತೆಗಿರುತ್ತೇವೆ’ ಎಂದು ಬರೆದಿದ್ದಾರೆ. ಮೋದಿ ಅವರ ನಡೆಯನ್ನು ಜಾಲತಾಣಗಳಲ್ಲಿ ಹಲವರು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT