ಕಲಬುರ್ಗಿ: ಊಟ ಇಲ್ಲ ಎಂದು ಬಂದವರಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳನ್ನು ಇಂದಿನಿಂದಲೇ ತೆರೆಯಬೇಕು ಎಂದು ಇಲಾಖೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಆದೇಶಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೊನಾ ಸೋಂಕು ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದವಸತಿ ನಿಲಯಗಳಲ್ಲಿ 14,800 ಕ್ವಿಂಟಲ್ ಅಕ್ಕಿ, 4800 ಕ್ವಿಂಟಲ್ ರವೆ, ಇಡ್ಲಿ ರವೆ, ಎಣ್ಣೆ ಇದೆ. ಅವರಿಗೆ ಬೆಡ್ ಶೀಟ್, ಟವೆಲ್ ಖರೀದಿಸಿ ಕೊಡಬೇಕು ಎಂದರು.
ನಿರಾಶ್ರಿತರು ಊಟ ಮಾಡಿ ಹೊರಗಡೆ ಓಡಾಡುವಂತಿಲ್ಲ. ವಸತಿ ನಿಲಯದಲ್ಲೇ ಇರುವಂತೆ ನೋಡಿಕೊಳ್ಳಬೇಕು. ಅವರಿಗೆ ನೀಡಲಾದ ಬೆಡ್ ಶೀಟ್, ಟವೆಲ್ ವಾಪಸ್ ಪಡೆಯಬೇಡಿ ಎಂದು ಇಲಾಖೆ ಜಂಟಿ ನಿರ್ದೇಶಕ ಅಲ್ಲಾಬಕ್ಷ್ ಅವರಿಗೆ ಸೂಚನೆ ನೀಡಿದರು.
ಕ್ಷೌರಿಕರ ಅಂಗಡಿಗಳು ಬಂದ್ ಆಗಿರುವುದರಿಂದ ಸವಿತಾ ಸಮಾಜದವರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ₹ 1200 ಮೊತ್ತದ ಅಗತ್ಯ ವಸ್ತುಗಳನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರಿಗೆ ನಿರ್ದೇಶನ ನೀಡಿದರು.