ಬೆಂಗಳೂರು: ‘ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧರಿಸಿ ಅನರ್ಹರಿಗೆ ಬೆಂಬಲ ನೀಡಬಾರದು’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.
ನಗರದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಅಯೋಜಿಸಿದ್ದ ‘ಔದ್ಯೋಗಿಕ ಕೌಶಲಾಧಾರಿತ ಕಲಿಕೆಯಾಗಿ ಪದವಿ ಶಿಕ್ಷಣ’ ಕಾರ್ಯಾಗಾರ ಉದ್ಘಾಟಿಸಿ, ‘ಸ್ವಜಾತಿಯವರು ಎಂಬ ಕಾರಣಕ್ಕೆ ಅನರ್ಹರಿಗೆ ಆದ್ಯತೆ ನೀಡಿದರೆ ವಿಶ್ವವಿದ್ಯಾಲಯಕ್ಕೆ ಕಪ್ಪುಚುಕ್ಕೆ ಬಂದಂತೆ ಆಗಲಿದೆ’ ಎಂದರು.
‘ಮುಂದಿನ ಪ್ರಜೆಗಳನ್ನು ಸೃಷ್ಟಿಸುವ ಪವಿತ್ರ ಹುದ್ದೆಯಲ್ಲಿ ಇರುವವರು ಭ್ರಷ್ಟಾಚಾರ ರಹಿತವಾಗಿ ಮತ್ತು ಜಾತ್ಯತೀತವಾಗಿ ನಡೆದುಕೊಳ್ಳಬೇಕು’ ಎಂದು ಹೇಳಿದರು.
‘ಸರ್ಕಾರಿ ವಿಶ್ವವಿದ್ಯಾಲಯಗಳು,ಖಾಸಗಿ ವಿಶ್ವವಿದ್ಯಾಲಯಗಳಿಗಿಂತ ಕಡಿಮೆ ಇಲ್ಲ. ದೊಡ್ಡ ದೊಡ್ಡ ಉದ್ಯಮಿಗಳನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಉಪನ್ಯಾಸ ಕೊಡಿಸಬೇಕು. ಈ ರೀತಿಯ ಕೆಲಸಗಳು ಸರ್ಕಾರಿ ಕಾಲೇಜುಗಳಲ್ಲಿ ಆಗುತ್ತಿಲ್ಲ. ವಿಶ್ವವಿದ್ಯಾಲಯಗಳ ಮುಖ್ಯಸ್ಥರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.