ಬೆಂಗಳೂರು: ‘ಸುಮಾರು ₹ 20 ಸಾವಿರ ಕೋಟಿಯಷ್ಟು ಆರ್ಥಿಕ ಹೊರೆ ಹೊಂದಿರುವ ಬಿಬಿಎಂಪಿ ಈ ಬಾರಿ ಮಂಡಿಸಿದ್ದು ಬೋಗಸ್ ಬಜೆಟ್ ಅಲ್ಲದೇ ಮತ್ತಿನ್ನೇನು?’ ಎಂದು ಪಾಲಿಕೆ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಕುಟುಕಿದರು.
ಬುಧವಾರ ಪಾಲಿಕೆಯಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲಿಕೆ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ತೆರೆದಿಟ್ಟ ರೆಡ್ಡಿ, ಈ ಮಾಹಿತಿ ತಪ್ಪಾದರೆ ಕ್ಷಮೆ ಕೋರಲು ಸಿದ್ಧ ಎಂದು ಸವಾಲು ಎಸೆದರು. ಇಡೀ ಚರ್ಚೆ ಆಡಳಿತ– ವಿರೋಧ ಪಕ್ಷದವರು ಪರಸ್ಪರ ಕಾಲೆಳೆಯುವುದರಲ್ಲೇ ಕಳೆದುಹೋಯಿತು.
ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಅವರು ಬಜೆಟನ್ನು ಬೆಂಬಲಿಸಿ, ‘ಇದೊಂದು ಒಳ್ಳೆಯ ಬಜೆಟ್. ಇಬ್ಬರು ಮಹಿಳೆಯರು (ಮೇಯರ್ ಗಂಗಾಂಬಿಕೆ ಮತ್ತು ಹಣಕಾಸು ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ) ಒಳ್ಳೆಯ ಬಜೆಟ್ ಮಂಡಿಸಿದ್ದಾರೆ’ ಎಂದು ಹೊಗಳಿದರು.
‘ಗುತ್ತಿಗೆದಾರರಿಗೆ ಆನ್ಲೈನ್ ಮೂಲಕ ಹಣ ಪಾವತಿ ಕ್ರಮ ಕೈಗೊಳ್ಳಲಾಗಿದೆ. ಪಾಲಿಕೆಯ 11 ಆಸ್ತಿಗಳ ಪೈಕಿ 6 ಆಸ್ತಿಗಳನ್ನು ಬಿಡಿಸಿಕೊಳ್ಳಲಾಗಿದೆ. ಈ ವರ್ಷದೊಳಗೆ ಮತ್ತೆ ಎರಡು ಆಸ್ತಿ ಬಿಡಿಸಿಕೊಳ್ಳುತ್ತೇವೆ. ಒಟ್ಟಿನಲ್ಲಿ ಅಡವಿರಿಸಲಾದ ಎಲ್ಲ ಆಸ್ತಿಗಳನ್ನು ಶೀಘ್ರವೇ ಬಿಡಿಸಿಕೊಳ್ಳುತ್ತೇವೆ’ ಎಂದರು.
‘ನಮ್ಮದು ಮನ್ ಕಿ ಬಾತ್ ಅಲ್ಲ. ಕಾಮ್ ಕಿ ಬಾತ್, ಸಬ್ ಕಾ ಸಾಥ್ ಸಬ್ಕಾ ವಿಕಾಸ್ ಬಗೆಗೂ ಮಾತನಾಡಬೇಕಾಗುತ್ತದೆ’ ಎಂದು ಪ್ರತಿಪಕ್ಷದವರ ಕಾಲೆಳೆಯುತ್ತಲೇ ಹೋದರು. ‘ಇಷ್ಟೆಲ್ಲಾ ಅಭಿವೃದ್ಧಿ ಯೋಜನೆ ಹೊಂದಿದ್ದರೂ ಬೋಗಸ್ ಬಜೆಟ್ ಎಂದೇ ಜರೆಯುತ್ತೀರಿ’ ಎಂದು ಬಿಜೆಪಿ ಸದಸ್ಯರನ್ನು ಚುಚ್ಚಿದರು.
ಬಜೆಟ್ ದಿನವೇ ನಗರಾಭಿವೃದ್ಧಿ ಇಲಾಖೆಯು ಆಯುಕ್ತರಿಗೆ ಬರೆದ ಪತ್ರವೊಂದನ್ನು ಹೊರತೆಗೆದ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ‘ಸರ್ಕಾರದ ಅನುದಾನವು ಪೂರ್ಣ ಬಿಡುಗಡೆಯಾಗುವ ಮುನ್ನವೇ ಬಜೆಟ್ ಮಂಡಿಸಲು ಬಿಬಿಎಂಪಿಮುಂದಾಗಿದೆ. ಆದಾಯಕ್ಕಿಂತಲೂ ವೆಚ್ಚ ಸಂಬಂಧಿಸಿ ಬಜೆಟ್ನಲ್ಲಿ ಹಲವು ಪ್ರಸ್ತಾವ ಮಾಡಲಾಗಿದೆ. ಸೀಮಿತ ಸಂಪನ್ಮೂಲದ ಒಳಗೇ ಪಾಲಿಕೆಯ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಬಜೆಟ್ ಸಿದ್ಧಪಡಿಸಬೇಕು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ. ಸರ್ಕಾರವೇ ಹೀಗೆಂದ ಮೇಲೆ ನಾವು ಪ್ರತ್ಯೇಕವಾಗಿ ಹೇಳಬೇಕೇ’ ಎಂದು ಪ್ರಶ್ನಿಸಿದರು.
‘ಬಿಬಿಎಂಪಿಯಲ್ಲಿ ಆದಾಯ ಮೂಲವೇ ಭದ್ರವಾಗಿಲ್ಲ. ವೆಚ್ಚದ ಪಟ್ಟಿ ಮಾತ್ರ ಉದ್ದವಾಗಿದೆ. ಕಳೆದ ಬಜೆಟ್ನಲ್ಲಿ ಘೋಷಿಸಲಾದ ಕಾರ್ಯಕ್ರಮಗಳೇ ಸರಿಯಾಗಿ ಅನುಷ್ಠಾನವಾಗಿಲ್ಲ. ಹೊಸ ಬಜೆಟ್ನಲ್ಲಿ ಅದೇನು ಹೊಸ ವಿಷಯವಿದೆ?’ ಎಂದು ಕಾಲೆಳೆದರು.
ಅನುಷ್ಠಾನಗೊಳ್ಳದ ಬಜೆಟ್: ‘ಪಾಲಿಕೆ ವ್ಯಾಪ್ತಿಯಲ್ಲಿ ಟೋಟಲ್ ಸ್ಟೇಷನ್ ಸರ್ವೇ ಮೂಲಕ ಆಸ್ತಿ ಸಮೀಕ್ಷೆ ಮಾಡಿ ತೆರಿಗೆ ಹಾಕಿ ಆದಾಯ ಸಂಗ್ರಹಿಸುವ ಗುರಿ ಇತ್ತು. ಅದಿನ್ನೂ ಪರಿಶೀಲನಾ ಹಂತದಲ್ಲಿದೆ. ಲಕ್ಷಾಂತರ ರೂಪಾಯಿ ಶುಲ್ಕ ಪಡೆಯುವ ಶಿಕ್ಷಣ ಸಂಸ್ಥೆಗಳ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಟ್ಟಿದ್ದೀರಿ. ಒಎಫ್ಸಿ ಅಳವಡಿಸಿದವರಿಂದ ಪಡೆಯುವ ಶುಲ್ಕ, ನಿಯಮ ಉಲ್ಲಂಘಿಸಿದವರಿಂದ ಪಡೆದ ದಂಡದ ಮೊತ್ತ ಏನು ಎಂಬ ಬಗ್ಗೆ ವಿವರವೇ ಇಲ್ಲ. ಪೌರ ಕಾರ್ಮಿಕರಿಗೆ ಸುರಕ್ಷತಾ ಕಿಟ್ ಕೊಟ್ಟಿಲ್ಲ. ಹಿರಿಯ ನಾಗರಿಕರಿಗೆ ಊಟ ಹಾಕುವ ಯೋಜನೆ ಕಾಂಗ್ರೆಸ್ ಸದಸ್ಯರ ವಾರ್ಡ್ಗಳಿಗಷ್ಟೇ ಸೀಮಿತಗೊಂಡಿದೆ. ಅದರಲ್ಲಿ ಬೋಗಸ್ ಬಿಲ್ ಆಗದಿದ್ದರೆ ಸಾಕು’ ಎಂದು ರೆಡ್ಡಿ ಕುಟುಕಿದರು.
ತೃತೀಯ ಲಿಂಗಿಗಳ ಶಾಪ ತಟ್ಟುತ್ತದೆ: ರೆಡ್ಡಿ
ತೃತೀಯ ಲಿಂಗಿಗಳಿಗೆ ಹಮ್ಮಿಕೊಳ್ಳಲಾದ ಕಲ್ಯಾಣ ಯೋಜನೆಗಳು ಯಾವುದೂ ಅವರಿಗೆ ತಲುಪಿಲ್ಲ. ಹೀಗಾಗಿ ನಿಮಗೆ (ಆಡಳಿತ ಪಕ್ಷಕ್ಕೆ) ಅವರ ಶಾಪ ತಟ್ಟುತ್ತದೆ ಎಂದು ಪದ್ಮನಾಭ ರೆಡ್ಡಿ ಹೇಳಿದರು.
ಅಂಗವಿಕಲರ ಮೇಲೂ ನಿಮ್ಮ ಕಾಳಜಿ ಏನು ಎಂಬುದು ಗೊತ್ತಾಗುತ್ತದೆ ಎಂದರು.
ಪಾಲಿಕೆಯಲ್ಲಿ ಮಹಿಳೆ ಬಜೆಟ್ ಮಂಡಿಸಿದ್ದಾರೆ. ಅದೇ ರೀತಿ ದೇಶದ ರಕ್ಷಣಾ ಸಚಿವರಾಗಿ ಮಹಿಳೆ (ಬಿಜೆಪಿಯವರು) ಇದ್ದಾರೆ ಎಂದು ಪಕ್ಷದ ಸಾಮರ್ಥ್ಯವನ್ನು ಪರೋಕ್ಷವಾಗಿ ಚರ್ಚೆಗೆ ಎಳೆತಂದರು.
**
ಮೇಯರ್ಗೆ ಹೊಸ ಬೇಟನ್ ಮತ್ತು ಬೆಳ್ಳಿ ಕೀಲಿ ಕೊಟ್ಟದ್ದು ಹೊರತುಪಡಿಸಿದರೆ ಬೇರೆ ಗಮನಾರ್ಹ ಬೆಳವಣಿಗೆಗಳೇನೂ ಆಗಿಲ್ಲ. ಅದನ್ನೂ ಬಜೆಟ್ನಲ್ಲಿ ಉಲ್ಲೇಖಿಸಿಲ್ಲ.
– ಪದ್ಮನಾಭ ರೆಡ್ಡಿ, ಬಿಬಿಎಂಪಿ ಪ್ರತಿಪಕ್ಷ ನಾಯಕ
*
ಹಿಂದಿನ ಬಜೆಟ್ನ ಶೇ 10 ಸಾಧನೆಯೂ ಆಗಿಲ್ಲ: ರೆಡ್ಡಿ
ಜಾಬ್ಕೋಡ್ ನೀಡಲಷ್ಟೇ ಸೀಮಿತವಾದ ಪಾಲಿಕೆ: ಟೀಕೆ
₹ 5.42 ಕೋಟಿ ಬಿಡುಗಡೆಗೆ ಬಾಕಿ ಇರುವ ಕಾಮಗಾರಿ ಬಿಲ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.