ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬಿಬಿಎಂಪಿ ಹೆಲ್ತ್ ಕೇರ್'ಗೆ ಕಾಯಕಲ್ಪ: ಡಿಸಿಎಂ ಅಶ್ವತ್ಥನಾರಾಯಣ 

Last Updated 13 ಮೇ 2020, 9:55 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಿ ಬಲಪಡಿಸಲಾಗುವುದು. 'ಬಿಬಿಎಂಪಿ ಹೆಲ್ತ್‌ ಕೇರ್‌' ಅಡಿಯಲ್ಲಿ ನಗರದ ಆರೋಗ್ಯ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಸಿ.ಎನ್ ಅಶ್ವತ್ಥನಾರಾಯಣ ತಿಳಿಸಿದರು.

ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಈ ಹಿಂದೆ ಮಾಡಿದ್ದ ಪ್ರಸ್ತಾವನೆಗಳ ಪರಿಶೀಲನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಅಧಿಕಾರಿಗಳ ಜತೆ ಅವರು ಸಭೆ ನಡೆಸಿದರು.

ಏನಿದು ಬಿಬಿಎಂಪಿ ಹೆಲ್ತ್‌ ಕೇರ್‌:'ಬಿಬಿಎಂಪಿ ಆರೋಗ್ಯ ಕೇಂದ್ರಗಳನ್ನು ಪೂರ್ಣ ಪ್ರಮಾಣದಲ್ಲಿ ಸದೃಢಗೊಳಿಸುವ ಯೋಜನೆಯೇ 'ಬಿಬಿಎಂಪಿ ಹೆಲ್ತ್‌ ಕೇರ್‌'. ಆ ಮೂಲಕ ಆರೋಗ್ಯ ಕೇಂದ್ರಗಳಲ್ಲಿ ರೋಗ ತಡೆಗೆ ಮುನ್ನೆಚ್ಚರಿಕಾ ಕ್ರಮಗಳ ಪಾಲನೆ ಹಾಗೂ ಪ್ರಾಥಮಿಕ ಮಟ್ಟದ ಚಿಕಿತ್ಸೆ, ಎಲ್ಲ ಕಾಯಿಲೆಗಳಿಗೂ ಔಷಧ ಹಾಗೂ ರೋಗ ಪತ್ತೆ, ತಪಾಸಣೆಗೆ ಲ್ಯಾಬ್‌ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲಾಗುವುದು' ಎಂದು ಉಪಮುಖ್ಯಮಂತ್ರಿ ತಿಳಿಸಿದರು.

"ಬಿಬಿಎಂಪಿ ಹೆಲ್ತ್‌ ಕೇರ್‌' ಪರಿಪೂರ್ಣ ಆರೋಗ್ಯ ವ್ಯವಸ್ಥೆಯಾಗಲಿದೆ. ಈ ಸಲುವಾಗಿ ನಗರದಲ್ಲಿ ಅಗತ್ಯ ಇರುವ ಎಲ್ಲರಿಗೂ ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು 24/7 ತೆರದಿರಬೇಕು. ಎಲ್ಲ ವೇಳೆಯಲ್ಲೂ ಜನರಿಗೆ ಅಗತ್ಯ ಚಿಕಿತ್ಸೆ ದೊರೆಯಬೇಕು. ಇದಕ್ಕಾಗಿ ಟೆಲಿ ಮೆಡಿಸನ್‌, ಟೆಲಿ ಕನ್ಸಲ್ಟೇಷನ್‌ ಸೌಲಭ್ಯದೊಂದಿಗೆ ದಾದಿಯರು ಎಲ್ಲ ಸಮಯದಲ್ಲೂ ಕೆಲಸ ನಿರ್ವಹಿಸುವಂತಿರಬೇಕು. ಎಲ್ಲ ರೀತಿಯ ಪರೀಕ್ಷೆ ನಡೆಸಲು ಪ್ರಯೋಗಾಲಯಗಳು ಸಜ್ಜಾಗಿರಬೇಕು. ಯಾವುದೇ ಸಬೂಬು ಹೇಳದೇ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತವಾಗಿ ಔಷಧ ಒದಗಿಸಬೇಕು. ಜತಗೆ, ಎಲ್ಲ ಕೇಂದ್ರಗಳಲ್ಲಿ ತಜ್ಞ ವೈದ್ಯರು ಲಭ್ಯ ಇರಬೇಕು ಎಂದು ಸಂಬಂಧಿಸಿದವರಿಗೆ ಸೂಚಿಸಲಾಗಿದೆ' ಎಂದು ವಿವರಿಸಿದರು.

198 ವಾರ್ಡ್‌ಗಳ ಲ್ಲಿ, 133 ಆರೋಗ್ಯ ಕೇಂದ್ರಗಳಲ್ಲಿ ಜನೌಷಧ ಕೇಂದ್ರ:

"ಆರೋಗ್ಯ ಕೇಂದ್ರಗಳಲ್ಲಿ ಔಷಧ ದಾಸ್ತಾನಿಲ್ಲ ಎಂದು ರೋಗಿಗಳನ್ನು ವಾಪಸ್‌ ಕಳುಹಿಸುವಂತಿಲ್ಲ. ಅಗತ್ಯ ಇರುವ ಎಲ್ಲ ರೀತಿಯ ಔಷಧಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಎಲ್ಲ 198 ವಾರ್ಡ್‌ಗಳಲ್ಲಿ ಹಾಗೂ ಎಲ್ಲ 133 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನ ಔಷಧ ಕೇಂದ್ರಗಳನ್ನು ತೆರೆಯಬೇಕು. ಹಿರಿಯ ನಾಗರಿಕರು ಹಾಗೂ ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತ ಔಷಧದ ಜತೆಗೆ ಟೆಸ್ಟ್‌ ಸೌಲಭ್ಯ ಒದಗಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಅವರು ಮಾಹಿತಿ ನೀಡಿದರು.

ಮಾಹಿತಿ ದಾಖಲೆ ವ್ಯವಸ್ಥೆ:

"ಎಲ್ಲ 133 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ವರದಿ ದಾಖಲೆಯ ವ್ಯವಸ್ಥೆ ಆಗಲಿದೆ. ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಂಗ್ರಹಿಸುವ ಪ್ರತಿ ವ್ಯಕ್ತಿಯ ಆರೋಗ್ಯ ವಿವರಗಳ ದಾಖಲೆ ಸಮರ್ಪಕವಾಗಿ ಆಗಬೇಕು. ಅಲ್ಲದೇ, ಆರೋಗ್ಯ ಕೇಂದ್ರಕ್ಕೆ ಬರುವವರ ವಿವರ, ಕಾಯಿಲೆ ಲಕ್ಷಣ, ಯಾವ ಚಿಕಿತ್ಸೆ, ಔಷಧ ನೀಡಲಾಗಿದೆ ಎಂಬ ಎಲ್ಲ ವಿವರಗಳನ್ನು ದಾಖಲಿಸಬೇಕು. ಇದಲ್ಲದೇ, ನಗರದ ಎಲ್ಲ ಡಯಾಗ್ನಾಸ್ಟಿಕ್‌ ಮತ್ತು ಲ್ಯಾಬ್‌ಗಳಲ್ಲಿ ನಡೆಯುವ ಎಲ್ಲ ರೀತಿಯ ಪರೀಕ್ಷೆಗಳು, ಆರೋಗ್ಯ ತಪಾಸಣೆಯ ವಿವರ ಬಿಬಿಎಂಪಿಗೆ ಸಿಗಬೇಕು. ಆರೋಗ್ಯ ವಿಚಾರದಲ್ಲಿ ಆಗುವಂಥ ಯಾವುದೇ ಬೆಳವಣಿಗೆ ಬಗ್ಗೆ ಬಿಬಿಎಂಪಿಗೆ ಸಂಪೂರ್ಣ ಮಾಹಿತಿ ಇರಬೇಕು. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ' ಎಂದು ಅವರು ವಿವರಿಸಿದರು.

ಕೊರತೆ ವಿಶ್ಲೇಷಣೆ:

ಕೊವಿಡ್‌ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಕೊರತೆಗಳನ್ನು ಪಟ್ಟಿ ಮಾಡಿ ಅದನ್ನು ಸೂಕ್ತವಾಗಿ ನಿಭಾಯಿಸಲು ಸೂಚಿಸಲಾಗಿತ್ತು. ಅದರಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಶ್ವತ್ಥನಾರಾಯಣ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಖರೀದಿ ಮಾಡಿರುವ ಸುರಕ್ಷತಾ ಉಪಕರಣಗಳಾದ ಮಾಸ್ಕ್‌, ಸ್ಯಾನಿಟೈಸರ್‌, ಪಿಪಿಇ ಕಿಟ್‌, ಥರ್ಮಲ್‌ ಸ್ಕ್ಯಾನರ್‌ಗಳನ್ನು ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಿರುವ ಬಗ್ಗೆ ವಿವರ ಪಡೆದು, ಸಿಬ್ಬಂದಿ ಹೆಚ್ಚಳದ ವಿಷಯವಾಗಿ ಚರ್ಚೆ ನಡೆಸಿದರು.

ಈ ಕುರಿತ ಮಾಹಿತಿ ನೀಡಿದ ಅಧಿಕಾರಿಗಳು, 'ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ನೆಬ್ಯುಲೈಸರ್‌ಗಳ ಜತೆಯಲ್ಲೇ ಆಮ್ಲಜನಕ ಸಿಲಿಂಡರ್‌ಗಳು ಲಭ್ಯವಿರುವ ಜತೆಗೆ ಉಸಿರಾಟದ ತೊಂದರೆ ಪ್ರಕರಣಗಳಿಗೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ನಗರ ಪ್ರಾಥಮಿಕ ಹೆರಿಗೆ ಆಸ್ಪತ್ರೆ ಹಾಗೂ ರೆಫರಲ್‌ ಆಸ್ಪತ್ರೆಗಳಲ್ಲಿ ಆಮ್ಲಜನಕ ವ್ಯವಸ್ಥೆ ಕಲ್ಪಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಅನುಷ್ಠಾನ ಗೊಳಿಸಲಾಗುವುದು' ಎಂದು ಹೇಳಿದರು.

ಸ್ಯಾನಿಟೈಸೇಷನ್‌ ಚಟುವಟಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಉಪಮುಖ್ಯಮಂತ್ರಿ ಸೂಚಿಸಿದರು. ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT