ತುಮಕೂರು: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರ ಕ್ಯಾತ್ಸಂದ್ರದ ಸಮೀಪ ಎಸ್ಆರ್ಎಸ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಬಸ್ ಶನಿವಾರ ಬೆಳಿಗ್ಗೆ ಬೆಂಕಿಗೆ ಆಹುತಿ ಆಗಿದೆ.
ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಿಂದ ಬೆಂಗಳೂರಿಗೆ ಈ ಬಸ್ ಸಾಗುತ್ತಿತ್ತು. ಬಸ್ನಲ್ಲಿ 30 ಪ್ರಯಾಣಿಕರಿದ್ದರು. ಚಾಲಕ ಸೇರಿದಂತೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಬೆಳಿಗ್ಗೆ 5.30ರ ವೇಳೆಗೆ ಬಸ್ ಕ್ಯಾತ್ಸಂದ್ರ ಸಮೀಪ ಹೆದ್ದಾರಿಯಲ್ಲಿ ಸಾಗುವಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಕಂಡ ಕೆಲ ಪ್ರಯಾಣಿಕರು ಕೂಗಾಡಿದ್ದಾರೆ. ಚಾಲಕ ತಕ್ಷಣ ವಾಹನ ನಿಲುಗಡೆ ಮಾಡುವಷ್ಟರಲ್ಲಿ ಎಲ್ಲ ಪ್ರಯಾಣಿಕರು ಎದ್ದು ಬಸ್ನಿಂದ ಕೆಳಕ್ಕೆ ಜಿಗಿದು ಅಪಾಯದಿಂದ ಪಾರಾಗಿದ್ದಾರೆ.
ಬೆಳಗಿನ ಜಾವ ಮತ್ತು ಬೆಂಗಳೂರು ಸಮೀಪಿಸುತ್ತಿರುವುದರಿಂದ ಬಹುತೇಕ ಪ್ರಯಾಣಿಕರು ಎಚ್ಚರವಿದ್ದರು. ಹೀಗಾಗಿ ಬೆಂಕಿ ಕಂಡ ತಕ್ಷಣ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಸಮೀಪದಲ್ಲೇ ಅಗ್ನಿಶಾಮಕ ದಳದ ಕಚೇರಿ ಇದೆ. ಅಲ್ಲಿನ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಿದ್ದಾರೆ. ಅಂದಾಜು ₹ 25 ಲಕ್ಷ ಮೊತ್ತದಷ್ಡು ನಷ್ಟವಾಗಿದೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.