ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ ಚಿಂತನೆಗಳು ಜನರಿಗೆ ತಲುಪಲಿ’

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ಅಭಿಪ್ರಾಯ
Last Updated 9 ಏಪ್ರಿಲ್ 2019, 20:37 IST
ಅಕ್ಷರ ಗಾತ್ರ

ಬೆಂಗಳೂರು: ‘ಓದು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ದೃಶ್ಯ ಮಾಧ್ಯಮದ ಮೂಲಕ ಗಾಂಧೀಜಿಯವರ ಚಿಂತನೆಗಳನ್ನು ಜನರಿಗೆ ತಲುಪಿಸಬೇಕಾದ ಅಗತ್ಯವಿದೆ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ಅಭಿಪ್ರಾಯಪಟ್ಟರು.

ಭಾರತೀಯ ವಿದ್ಯಾಭವನ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಯೋಗದೊಂದಿಗೆ ನಗರದಲ್ಲಿಆಯೋಜಿಸಿರುವ ಮೂರು ದಿನಗಳ ‘ಮಹಾತ್ಮ ಗಾಂಧಿ–150’ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗಾಂಧೀಜಿಯವರಿಗೆ ವೈಯಕ್ತಿವಾಗಿ ಚಲನಚಿತ್ರಗಳಲ್ಲಿ ಅಷ್ಟು ಆಸಕ್ತಿ ಇರಲಿಲ್ಲ. ಚಲನಚಿತ್ರ, ಯಂತ್ರ ಸಂಸ್ಕೃತಿಯ ಪ್ರತಿನಿಧಿ ಹಾಗೂ ಅದೊಂದು ವ್ಯವಹಾರ ಎನ್ನುವ ಚಿಕ್ಕ ನಿರ್ಲಕ್ಷ್ಯ ಇತ್ತು. ವಿಪರ್ಯಾಸವೆಂದರೆ ಅವರು ಇಷ್ಟಪಡದ ಮಾಧ್ಯಮದ ಮೂಲಕವೇ ಜಗತ್ತಿನ ಯುವಜನತೆಯನ್ನು ತಲುಪಿದ್ದಾರೆ’ ಎಂದರು.

‘ಗಾಂಧೀಜಿಯವರ ಕುರಿತಾದ ಸಿನಿಮಾಗಳು ಪ್ರತಿ ಬಾರಿಯೂ ಹೊಸ ಹೊಳಹು ಹಾಗೂ ಅರ್ಥವನ್ನು ಕೊಡುತ್ತವೆ. ಕೆಲವೊಂದು ವಿಷಯದಲ್ಲಿ ಅವರನ್ನು ಒಪ್ಪದಿದ್ದರೂ, ಅವರ ಎದುರು ಮಂಡಿಯೂರಿ ಪ್ರಾರ್ಥಿಸುವಂತೆ ಮಾಡುತ್ತವೆ’ ಎಂದು ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ,‘ಯುದ್ಧ ಬಯಸುವುದನ್ನೇ ರಾಷ್ಟ್ರಪ್ರೇಮ ಎಂದುಕೊಂಡಿರುವ ಪ್ರಸ್ತುತ ದಿನಮಾನಗಳಲ್ಲಿ ಗಾಂಧೀಜಿಯವರ ವಿಚಾರಧಾರೆಗಳು ತುಂಬಾ ಮುಖ್ಯವಾಗುತ್ತವೆ’ ಎಂದು ಹೇಳಿದರು.

‘ಗಾಂಧಿಯನ್ನು ವ್ಯಕ್ತಿಯಾಗಿ ನೋಡಬಾರದು ಒಂದು ತತ್ವವಾಗಿ ನೋಡಬೇಕು. ಅವರು ನಂಬಿದ ಬಹುತ್ವದ ಮೌಲ್ಯವನ್ನು ಪ್ರತಿಯೊಬ್ಬರು ಕಾಪಾಡಿಕೊಂಡು ಹೋಗಬೇಕು’ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌ ಮಾತನಾಡಿ,‘ಗಾಂಧಿ ಒಬ್ಬ ಶ್ರೇಷ್ಠ ಬರಹಗಾರರಾಗಿದ್ದರು. ಅವರ ಬರಹಗಳನ್ನು 100 ಸಂಪುಟದಲ್ಲಿ ಸಂಪಾದಿಸಲಾಗಿದೆ’ ಎಂದು ತಿಳಿಸಿದರು.ರಿಚರ್ಡ್‌ ಅಟೆನ್‌ಬರೊ ನಿರ್ದೇಶನದ ‘ಗಾಂಧಿ’ ಚಿತ್ರ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT