ಸುಬ್ರಹ್ಮಣ್ಯ: ಮುಜರಾಯಿ ಇಲಾಖೆಗೆ ಸೇರಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯದಲ್ಲಿ ಈ ವರ್ಷ ಭಾರಿ ಇಳಿಕೆಯಾಗುವ ಸಾಧ್ಯತೆಗಳು ಕಂಡುಬಂದಿವೆ. ಹೆದ್ದಾರಿ ಬಂದ್ ಹಾಗೂ ಪ್ರಾಕೃತಿಕ ವಿಕೋಪಗಳು ಇದಕ್ಕೆ ಕಾರಣಗಳು ಎಂದು ಹೇಳಲಾಗುತ್ತಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಹಾಗೂ ಮಳೆಗಾಲದಲ್ಲಿ ಭೂಕುಸಿತದಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಂಪರ್ಕ ಬಂದ್ ಆಗಿತ್ತು. ಇದರಿಂದ ದೇಗುಲ ತಲುಪಲು ಭಕ್ತರಿಗೆ ಕಷ್ಟವಾಗಿತ್ತು. ಭಕ್ತರು ಕಡಿಮೆ ಸಂಖ್ಯೆಯಲ್ಲಿ ಬಂದ ಕಾರಣ ಕಾಣಿಕೆ, ಹರಕೆ ಸೇವೆಗಳಲ್ಲಿ ಇಳಿಮುಖಗೊಂಡು ಆದಾಯಕ್ಕೆ ಪೆಟ್ಟು ಬೀಳಲಿದೆ ಎಂದು ಅಂದಾಜಿಸಲಾಗುತ್ತಿದೆ.
2017-18ನೇ ಸಾಲಿನಲ್ಲಿ ದೇವಸ್ಥಾನದ ಆದಾಯ ₹95.92 ಕೋಟಿ ಆಗಿತ್ತು. ಏಳು ವರ್ಷಗಳಿಂದ ಆದಾಯ ದ್ವಿಗುಣಗೊಳ್ಳುತ್ತಿದ್ದು, ರಾಜ್ಯದಲ್ಲಿ ಮೊದಲ ಸ್ಥಾನವನ್ನು ದೇಗುಲ ಪಡೆದಿತ್ತು. ದೇಗುಲಕ್ಕೆ ದೇಶ-ವಿದೇಶಗಳಿಂದ ಹೆಚ್ಚಿನ ಭಕ್ತರು ಬರುತ್ತಿದ್ದು, ಬ್ರಹ್ಮರಥೋತ್ಸವ ಸೇವೆ, ಹರಕೆ ಸೇವೆ, ಕಾಣಿಕೆ ಡಬ್ಬಿ, ಛತ್ರಗಳ ಬಾಡಿಗೆ ಮತ್ತು ಕೃಷಿ ತೋಟಗಳಿಂದ ದೇಗುಲಕ್ಕೆ ಆದಾಯ ಬರುತ್ತದೆ.
ಶಿರಾಡಿ ಘಾಟ್ ರಸ್ತೆ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ವೇಳೆ 5 ತಿಂಗಳು ಈ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಈ ವೇಳೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡ ನಂತರ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದರಿಂದ ಕ್ಷೇತ್ರಕ್ಕೆ ಸಂಪರ್ಕ ಬಂದ್ ಆಗಿತ್ತು.
ಇತ್ತ ಮಡಿಕೇರಿ-ಸುಳ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯೂ ಭೂಕುಸಿತದಿಂದ ಸಂಪರ್ಕ ಕಳೆದುಕೊಂಡಿತ್ತು. ರೈಲು ಸಂಚಾರ ಕೂಡ ಸ್ಥಗಿತವಾಗಿತ್ತು. ಇದೆಲ್ಲದರ ಪರಿಣಾಮ ಕುಕ್ಕೆ ಕ್ಷೇತ್ರಕ್ಕೆ ನಾಡಿನ ವಿವಿಧೆಡೆಯಿಂದ ಬರುವ
ವರಿಗೆ ತೊಂದರೆಯಾಗಿದೆ. ಭಕ್ತರ ಸಂಖ್ಯೆ
ಯಲ್ಲೂ ಇಳಿಕೆಯಾಗಿದೆ. ದೇಗುಲದ ಕಾಣಿಕೆ, ಹರಕೆ ಸೇವೆಗಳು ವೃದ್ಧಿಯಾಗದೆ ದೇಗುಲದ ಬೊಕ್ಕಸಕ್ಕೆ ಹೊಡೆತ ಬಿದ್ದಿದೆ.
₹180 ಕೋಟಿ ವೆಚ್ಚದ ಕಾಮಗಾರಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ₹180 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಯಲ್ಲಿ ನಗರದ ರಸ್ತೆಗಳ ಅಭಿವೃದ್ಧಿಗೆ ₹68 ಕೋಟಿಯನ್ನು ದೇವಸ್ಥಾನದ ವತಿಯಿಂದ ಲೋಕೋಪಯೋಗಿ ಇಲಾಖೆಗೆ ಠೇವಣಿ ಇಡಲಾಗಿದೆ. ಜತೆಗೆ ಭಕ್ತರ ಅನುಕೂಲಕ್ಕಾಗಿ ದೇಗುಲದ ಆಡಳಿತ ಮಂಡಳಿ ಇನ್ನು ಹಲವಾರು ಕಾಮಗಾರಿಗಳಿಗೆ ₹73 ಕೋಟಿ ಪ್ರತ್ಯೇಕವಾಗಿ ಇಟ್ಟಿದೆ. ಈ ಹಣಕ್ಕೆ ಬಡ್ಡಿ ದೊರಕದಿರುವುದು ಕೂಡ ಆದಾಯ ಇಳಿಕೆಗೆ ಇನ್ನೊಂದು ಕಾರಣವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.