ಪುತ್ತೂರು: ತಾಲ್ಲೂಕಿನ ಪ್ರೌಢಶಾಲೆಯೊಂದರ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲೆ ವಿವಾಹಿತ ವ್ಯಕ್ತಿಯೊಬ್ಬ ಶುಕ್ರವಾರ ಬೆಳಿಗ್ಗೆ ಅತ್ಯಾಚಾರ ನಡೆಸಿದ್ದಾನೆ.
ಮಾಡ್ನೂರು ಗ್ರಾಮದ ಪಳನೀರು ನಿವಾಸಿ ಅಜಿತ್ (28) ಎಂಬಾತ ಅತ್ಯಾಚಾರ ನಡೆಸಿರುವ ಆರೋಪಿ. ಆರೋಪಿಯನ್ನು ಬಂಧಿಸಿರುವ ಸಂಪ್ಯ ಠಾಣೆ ಪೊಲೀಸರು, ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಬಾಲಕಿ ಎಂದಿನಂತೆ ಶುಕ್ರವಾರ ಬೆಳಿಗ್ಗೆ ಮನೆಯಿಂದ ಕಾಡಿನ ಮಾರ್ಗವಾಗಿ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಳು. ಆಕೆಗೆ ಎದುರಾದ ಆರೋಪಿ, ‘ನನ್ನ ಅಮ್ಮ ಸೊಪ್ಪು ಕಡಿಯಲು ಬಂದು ಸುಸ್ತಾಗಿ ಗುಡ್ಡದಲ್ಲಿ ಬಿದ್ದಿದ್ದಾರೆ. ಅವರನ್ನು ಮೇಲಕ್ಕೆತ್ತಲು ಸಹಾಯ ಮಾಡು’ ಎಂದು ವಿನಂತಿಸಿಕೊಂಡು ನಂಬಿಸಿದ್ದ. ತಾಯಿ ದೂರದಲ್ಲಿ ಬಿದ್ದಿದ್ದಾರೆ ಎಂದು ಹೇಳಿ ಆಕೆಯನ್ನು ಗುಡ್ಡಕ್ಕೆ ಕರೆದುಕೊಂಡು ಹೋಗಿ ಕಿರುಚಾಡದಂತೆ ಬಾಯಿಗೆ ಕೈ ಅಡ್ಡಹಿಡಿದು ಅತ್ಯಾಚಾರಕ್ಕೆ ಯತ್ನಿಸಿದ್ದ. ಆ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಬಾಲಕಿಯ ಮೇಲೆ ಆರೋಪಿ ಆತ್ಯಾಚಾರವೆಸಗಿದ್ದ’ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
‘ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿ ಎಚ್ಚರಗೊಂಡು 9 ಗಂಟೆಗೆ ವೇಳೆಗೆ ಮತ್ತೆ ಮನೆಗೆ ತಲುಪಿದ್ದಾಳೆ. ಆಯಾಸಗೊಂಡು ಮಲಗಿದ್ದ ಆಕೆಯನ್ನು ಕುಟುಂಬದವರು ವಿಚಾರಿಸಿದಾಗ ವಿಷಯವನ್ನು ತಿಳಿಸಿದ್ದಾಳೆ. ಕೂಡಲೇ ಬಾಲಕಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲೇಜು ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೃತ್ಯದ ವಿಡಿಯೊ ವೈರಲ್ ಪ್ರಕರಣ ಬಯಲಾದ ಬೆನ್ನಿಗೇ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆದಿದೆ.
ವಕಾಲತ್ತು ಮಾಡದಂತೆ ಮನವಿ:
ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯನ್ನು ಸಂತೈಸಿದ ಶಾಸಕ ಸಂಜೀವ ಮಠಂದೂರು ಘಟನೆಯನ್ನು ಖಂಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಪುತ್ತೂರಿನಲ್ಲಿ ಇಂತಹ ಘಟನೆಗಳು ಪದೇ ಪದೇ ಸಂಭವಿಸುತ್ತಿದೆ. ಮಾನವ ಸಮಾಜಕ್ಕೆ ರಾಕ್ಷಸೀ ಪ್ರವೃತ್ತಿಯ ಕಾಮುಕರಿಂದ ತೊಂದರೆ ಉಂಟಾಗುತ್ತಿದೆ. ಇಂತಹ ಪ್ರಕರಣಗಳ ಆರೋಪಿಗಳ ಪರವಾಗಿ ಯಾವ ವಕೀಲರೂ ವಾದ ಮಾಡಲು ಮುಂದಾಗದೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.