ಬೆಂಗಳೂರು: ‘ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ನಗದುರಹಿತ ಆರೋಗ್ಯ ಸೇವೆ ಒದಗಿಸುವ ಕಾರ್ಡ್ ವಿತರಿಸುವಂತೆ ಮುಖ್ಯಮಂತ್ರಿಗೆ ಮತ್ತು ಶಿಕ್ಷಣ ಸಚಿವರನ್ನು ಒತ್ತಾಯಿಸಿದ್ದೇನೆ’ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು.
ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶಿಕ್ಷಕರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಯಾವುದೇ ಷರತ್ತಿಲ್ಲದೆ ನಗದುರಹಿತ ಚಿಕಿತ್ಸೆ ನೀಡಲು ಗುರುತಿನ ಚೀಟಿ ಅಗತ್ಯ. ಇದನ್ನು ಜ್ಯೋತಿ ಸಂಜೀವಿನಿ ಯೋಜನೆಯಡಿ ಅಥವಾ ಪ್ರತ್ಯೇಕವಾಗಿಯೇ ನೀಡಬೇಕು’ ಎಂದರು.
‘ಶಿಕ್ಷಕರ ವೇತನವನ್ನು ತಾಲ್ಲೂಕು, ಜಿಲ್ಲಾ ಖಜಾನೆಯಿಂದ ನೀಡುವ ವ್ಯವಸ್ಥೆ ಬಿಟ್ಟು ರಾಜ್ಯ ಖಜಾನೆಯಿಂದ (ಸ್ಟೇಟ್ ಹೆಡ್) ಪ್ರತಿ ತಿಂಗಳು 5ರೊಳಗೆ ವೇತನ ನೀಡಲು ವ್ಯವಸ್ಥೆ ಮಾಡುವಂತೆಯೂ ಬೇಡಿಕೆ ಇಟ್ಟಿದ್ದೇನೆ’ ಎಂದರು.
ಶಿಕ್ಷಕರ ಹೃದಯ ನಿಧಿ:‘ಶಿಕ್ಷಕರ ಹೃದಯ ನಿಧಿ’ ಯೋಜನೆಯ ನಾಲ್ಕನೇ ವಾರ್ಷಿಕೋತ್ಸವವನ್ನೂ ಇದೇ ಸಂದರ್ಭದಲ್ಲಿ ಆಚರಿಸಲಾಯಿತು. ಹೃದಯ ತೊಂದರೆಯಿಂದ ಬಳಲುವ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾಗುವ ಶಿಕ್ಷಕರು ಈ ‘ಹೃದಯ ಸಂಜೀವಿನಿ’ ಕಾರ್ಡ್ ಹೊಂದಿದ್ದರೆ ಅವರಿಗೆ ₹25 ಸಾವಿರ ನೀಡಲಾಗುತ್ತಿದೆ. ಈವರೆಗೆ 500 ಶಿಕ್ಷಕರು ಹೆಸರು ನೋಂದಾಯಿಸಿದ್ದಾರೆ.
ಶಿಕ್ಷಕರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಉತ್ತಮ ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.