ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಾನಂದ ಕಾಶಪ್ಪನವರ ಗೈರು ಜಾಮೀನುರಹಿತ ವಾರಂಟ್‌ಗೆ ಆದೇಶ

Last Updated 13 ಮಾರ್ಚ್ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಇಳಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಆರೋಪಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೆಂಡ ಕಾರಿದ್ದು ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಬುಧವಾರ ಬೆಳಗ್ಗೆ ಪ್ರಕರಣವನ್ನು ವಿಚಾರಣೆಗೆ ಕೂಗಿಸಿದಾಗ ಕಾಶಪ್ಪನವರ ಪರ ವಕೀಲರು, ‘ಕಾಶಪ್ಪನವರ ಶೌಚಾಲಯಕ್ಕೆ ಹೋಗಿದ್ದಾರೆ‌’ ಎಂದರು. ಈ ಕಾರಣಕ್ಕಾಗಿ 1.45ಕ್ಕೆ ಪುನಃ ಕರೆಯಲು ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ನಿರ್ದೇಶಿಸಿದರು.

1.45ಕ್ಕೆ ಮತ್ತೆ ಕೂಗಿಸಿದಾಗ ಆರೋಪಿ ಮತ್ತು ಆರೋಪಿ ಪರ ವಕೀಲರಿಬ್ವರೂ ಗೈರು ಹಾಜರಾಗಿದ್ದರು. ಇದರಿಂದಾಗಿ ವಿಚಾರಣೆಯನ್ನು ಮಧ್ಯಾಹ್ನ 3 ಕ್ಕೆ ಮುಂದೂಡಲಾಯಿತು.

ಮಧ್ಯಾಹ್ನ 3 ಗಂಟೆಗೆ ಕೂಗಿಸಿದಾಗ ಕಾಶಪ್ಪನವರ ಪರ ವಕೀಲರು, ‘ಪರಿಚಿತರು ನಿಧನ ಹೊಂದಿರುವ ಕಾರಣ ಕೋರ್ಟ್‌ನಿಂದ ತುರ್ತಾಗಿ ನಿರ್ಗಮಿಸಿದ್ದಾರೆ. ಆದ್ದರಿಂದ ವಿನಾಯ್ತಿ ನೀಡಬೇಕು’ ಎಂದು ಕೋರಿ ಅರ್ಜಿ ಸಲ್ಲಿಸಿದರು.

ಈ ಅರ್ಜಿಯನ್ನು ಓದಿದ ನ್ಯಾಯಾಧೀಶರು ಕನಲಿ ಕೆಂಡವಾಗಿ ವಕೀಲರನ್ನು ತರಾಟೆಗೆ ತೆಗೆದುಕೊಂಡರು.

‘ಏನ್ರೀ ಈ ಮನವಿಯಲ್ಲಿ ಆರೋಪಿಗೂ ಸತ್ತವರಿಗೂ ಏನು ಸಂಬಂಧವಿದೆ. ಸುಮ್ಮಸುಮ್ಮನೆ ಯಾರನ್ನೋ ಕೊಲ್ಲಲು ಹೋಗಬೇಡಿ. ನಿಮ್ಮ ಆತ್ಮಸಾಕ್ಷಿಯಿಂದ ಹೇಳಿ ಅವರು ಸತ್ತಿದ್ದಾರೆ ಅಂತಾ’ ಎಂದು ಕಿಡಿ ಕಾರಿದರು.

ಇದಕ್ಕೆ ಉತ್ತರಿಸಲು ವಕೀಲರು ತಡಬಡಾಯಿಸಿದಾಗ, ‘ಬೆಳಗ್ಗೆ ಶೌಚಾಲಯಕ್ಕೆ ಹೋಗಿದ್ರು ಅಂತಾ ಸುಳ್ಳು ಹೇಳ್ತೀರ. ಈಗ ನೋಡಿದರೆ ಪರಿಚಿತರು ಸತ್ತಿದ್ದಾರೆ ಅಂತಾ ಹೇಳ್ತೀರಾ’ ಎಂದು ಜಾಮೀನು ರಹಿತ ವಾರಂಟ್‌ಗೆ ಆದೇಶಿಸಿದರು.

‘ಮುಂದಿನ ವಿಚಾರಣೆಗೆ ಹಾಜರಾಗಲಿ ಆವಾಗ ಏನಾಗುತ್ತೊ ನೋಡಿ, ನಿಮ್ಮ ಹಣೆಬರಹ’ ಎಂದು ಕಾಶಪ್ಪನವರ ಪರ ವಕೀಲರಿಗೆ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT