ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿದೆ ಉದ್ಯೋಗ: ಪ್ರಕಾಶ್‌ ರೈ ಪ್ರಶ್ನೆ

Last Updated 15 ಫೆಬ್ರುವರಿ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ನಗರದಲ್ಲಿ ‘ಉದ್ಯೋಗಕ್ಕಾಗಿ ಯುವಜನರು’ ಮತ್ತು ‘ಗುತ್ತಿಗೆ ನೌಕರರ ಒಕ್ಕೂಟ’ವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವಜನರ ಸಮಸ್ಯೆಗಳಿಗೆ ಸಂಬಂಧಿಸದ ಪ್ರಣಾಳಿಕೆಯನ್ನು ನಟ ಪ್ರಕಾಶ್‌ ರಾಜ್‌ ಶುಕ್ರವಾರ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ‘ದಶಕಗಳ ಹಿಂದೆ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗದ ಭದ್ರತೆ ಹೆಚ್ಚಾಗಿತ್ತು. ಆದರೆ ಈಗ ಎಷ್ಟೋ ವಿದ್ಯಾರ್ಥಿಗಳು‌ ಉದ್ಯೋಗಕ್ಕಾಗಿ ಅಲೆಯುತ್ತಿದ್ದಾರೆ. ಉದ್ಯೋಗ ಕಲ್ಪಿಸುವ ಭರವಸೆ ಕೊಟ್ಟಿದ್ದ ಸರ್ಕಾರಗಳು ಮಾತು ತಪ್ಪಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಉದ್ಯೋಗವು ಸಮಾಜದಲ್ಲಿ ವ್ಯಕ್ತಿಯ ಗೌರವದಿಂದ ಬದುಕಲು ಅವಕಾಶ ನೀಡುತ್ತದೆ. ಜತೆಗೆ ಎಲ್ಲ ವರ್ಗಗಳಿಗೂ ಶಿಕ್ಷಣ ಒದಗಿಸಬೇಕು. ಚಿಕ್ಕಪುಟ್ಟ ಕೆಲಸಗಳಿಗೂ ಭ್ರಷ್ಟಾಚಾರ ನಡೆಯುತ್ತಿದೆ. ನಾವು ಆರಿಸಿರುವ ಜನಪ್ರತಿನಿಧಿಗಳು, ಇವುಗಳಲ್ಲಿ ಶಾಮೀಲಾಗಿರುತ್ತಾರೆ. ಭ್ರಷ್ಟಾಚಾರ ಹಾಗೂ ಹೊಣೆಗೇಡಿತನಕ್ಕೆ ಚುನಾವಣಾ ವ್ಯವಸ್ಥೆಯೇ ಕಾರಣ’ ಎಂದು ಆರೋಪಿಸಿದರು.

‘ಪಾರದರ್ಶಕತೆ ಚುನಾವಣೆ ವ್ಯವಸ್ಥೆ ಬರುವವರೆಗೂ ಮತ್ತು ಜನರ ಸಂಕಷ್ಟ ಅರ್ಥ ಮಾಡಿಕೊಳ್ಳದ ವ್ಯಕ್ತಿಗಳು ಆಯ್ಕೆ ಆಗುವವರೆಗೂ ದೇಶ ಉದ್ಧಾರವಾಗುವುದಿಲ್ಲ’ ಎಂದು ಹೇಳಿದರು.

ಹೋರಾಟಗಾರ ಎಸ್.ಆರ್.ಹೀರೇಮಠ, ‘ಸಮಾನತೆಗಾಗಿ ಅಂಬೇಡ್ಕರ್, ಬುದ್ಧ, ಬಸವಣ್ಣ...ಅನೇಕ ನಾಯಕರು ಹಂತ ಹಂತವಾಗಿ ಚಳವಳಿ ನಡೆಸಿರುವ ಉದಾಹರಣೆಗಳು ನಮ್ಮ ಮುಂದಿವೆ. ಸಮಾಜ ಆರೋಗ್ಯಕ್ಕೆ ಶಿಕ್ಷಣ ಮುಖ್ಯ. ಆದರೆ, ರಾಜಕಾರಣಿಗಳು ಅದನ್ನು ಧಿಕ್ಕರಿಸಿದ್ದಾರೆ. ನಮ್ಮ ಹಕ್ಕುಗಳಿಗಾಗಿ ಚಳವಳಿ ಕೈಗೊಳ್ಳುವುದು ಅವಶ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಕ್ಕೊತ್ತಾಯಗಳು: ಉದ್ಯೋಗ ಸೃಷ್ಟಿ ಮತ್ತು ಅದರ ಉಸ್ತುವಾರಿಗೆ ಉದ್ಯೋಗ ಆಯೋಗ ರಚನೆ, ಗುತ್ತಿಗೆ ಆಧಾರದ ನೌಕರರಿಗೆ ಉದ್ಯೋಗ ಭದ್ರತೆ ಮತ್ತು ಸಮಾನ ವೇತನ, ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಸಮಾವೇಶದಲ್ಲಿ ಒತ್ತಾಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT