ನವದೆಹಲಿ: ‘ಸಂಸತ್ತಿನ ಮುಂಗಾರು ಅಧಿವೇಶನ ಆರಂಭಿಸುವ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು‘ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಭಾನುವಾರ ತಿಳಿಸಿದ್ದಾರೆ.
‘ಮುಂಗಾರು ಅಧಿವೇಶನ ನಡೆಸಲು ಸೆಪ್ಟೆಂಬರ್ವರೆಗೂ ಕಾಲಾವಕಾಶವಿದೆ. ಈ ಹಿಂದೆ ಕೆಲವು ಬಾರಿ ಆಗಸ್ಟ್ ಅಂತ್ಯದಲ್ಲೂ ನಡೆಸಲಾಗಿದೆ’ ಎಂದು ತಿಳಿಸಿದ್ದಾರೆ.
‘ಕೋವಿಡ್–19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಮುಂದಿನ ದಿನಗಳಲ್ಲಿ ಯಾವ ರೀತಿ ಇರುತ್ತದೆ ಎಂದು ಕಾದು ನೋಡಬೇಕಾಗಿದೆ. ಈ ಸನ್ನಿವೇಶದಲ್ಲಿ ಅಧಿವೇಶನವನ್ನು ಯಾವ ರೀತಿ ನಡೆಸಬೇಕು ಎನ್ನುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.
ಮಾರ್ಚ್ 23ರಂದು ಸಂಸತ್ತಿನ ಉಭಯ ಸದನಗಳನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿತ್ತು. ಕೊರೊನಾ ವೈರಸ್ ಸಾಂಕ್ರಾಮಿಕ ಕಾಯಿಲೆ ಕಾರಣಕ್ಕೆ ಬಜೆಟ್ ಅಧಿವೇಶನವನ್ನು ನಿಗದಿಪಡಿಸಿದ ಅವಧಿಯ ಎರಡು ವಾರಗಳ ಮುನ್ನವೇ ಮುಂದೂಡಲಾಗಿತ್ತು.
ಲೋಕಸಭೆಯಲ್ಲಿ 15 ಮತ್ತು ರಾಜ್ಯಸಭೆಯಲ್ಲಿ 13 ಮಸೂದೆಗಳಿಗೆ ಅನುಮೋದನೆ ನೀಡಲಾಗಿತ್ತು. ಅಧಿವೇಶನವನ್ನು ಮುಂದೂಡುವ ಮುನ್ನ ಉಭಯ ಸದನಗಳು ಮಹತ್ವದ ಹಣಕಾಸು ಮಸೂದಗೆ ಅನುಮೋದನೆ ನೀಡಿದ್ದವು.