ಲಖನೌ: ಉತ್ತರ ಪ್ರದೇಶದ ವಿಧಾನಸಭೆಗೆ 2022ರಲ್ಲಿ ನಡೆಯಲಿರುವ ಚುನಾವಣೆಯ ನೇತೃತ್ವವನ್ನು ಪ್ರಿಯಾಂಕಾ ಗಾಂಧಿ ಅವರು ವಹಿಸಬೇಕು ಎಂಬುದು ಪಕ್ಷದ ಕಾರ್ಯಕರ್ತರ ನಿಲುವು. ಆದರೆ ಆ ಬಗ್ಗೆ ಅಂತಿಮ ತೀರ್ಮಾನವನ್ನು ಸ್ವತಃ ಪ್ರಿಯಾಂಕಾ ಹಾಗೂ ಕಾಂಗ್ರೆಸ್ನ ಕಾರ್ಯಕಾರಿ ಸಮಿತಿ ತೆಗೆದುಕೊಳ್ಳಬೇಕು ಎಂದು ಪಕ್ಷದ ಮುಖಂಡ ಜಿತಿನ್ ಪ್ರಸಾದ್ಹೇಳಿದ್ದಾರೆ.
‘2022ರ ಚುನಾವಣೆಯಲ್ಲಿ ಕಾಂಗ್ರೆಸ್ ಯಾರ ಜತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಪಕ್ಷದ ಕಾರ್ಯಕಾರಿ ಸಮಿತಿಯ ಆಹ್ವಾನಿತ ಸದಸ್ಯರಾಗಿರುವ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ರಾಜ್ಯ ಸರ್ಕಾರ ಸುದ್ದಿಗಳನ್ನು ನಿರ್ವಹಿಸುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದ ಅವರು, ‘ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದವರೇ ಯಾಕೆ ಹೆಚ್ಚಾಗಿ ಅಪರಾಧಕ್ಕೆ ಬಲಿಯಾಗುತ್ತಿದ್ದಾರೆ, ಸರ್ಕಾರದ ಉದ್ದೇಶವಾದರೂ ಏನು’ ಎಂದು ಪ್ರಶ್ನಿಸಿದ್ದಾರೆ.
‘ವಿಕಾಸ್ ದುಬೆಯ ಎನ್ಕೌಂಟರ್ ನಕಲಿಯಾಗಿತ್ತು. ಇದರಲ್ಲಿ ಸರ್ಕಾರದ ಉದ್ದೇಶವೇ ಶಂಕಾಸ್ಪದವಾಗಿದೆ. ಸುಪ್ರೀಂ ಕೋರ್ಟ್ನ ಮೇಲ್ವಿಚಾರಣೆಯಲ್ಲಿ ಈ ಎನ್ಕೌಂಟರ್ನ ತನಿಖೆ ನಡೆಸಬೇಕು ಎಂದು ನಾವು ಒತ್ತಾಯಿಸಿದ್ದೇವೆ. ವಿಕಾಸ್ ದುಬೆ ಇಷ್ಟೊಂದು ದೊಡ್ಡ ಅಪರಾಧಿಯಾಗಲು ಬಿಟ್ಟವರು ಯಾರು ಎಂಬುದನ್ನು ಈಗ ಮುಚ್ಚಿಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
‘ಪ್ರಿಯಾಂಕಾ ಅವರನ್ನು ‘ಟ್ವಿಟರ್ ನಾಯಕಿ’ ಎಂದು ಟೀಕಿಸುವವರು, ಮೊದಲು ತಾವು ಮಾಡಿದ್ದೇನು ಎಂಬುದನ್ನು ಜನರಿಗೆ ದಾಖಲೆ ಸಹಿತ ತಿಳಿಸಬೇಕು. ರಾಜ್ಯದ ಆರೋಗ್ಯ, ಮೂಲಸೌಲಭ್ಯ, ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ಏನೆಂಬುದನ್ನು ಅಂಥವರು ತಿಳಿಸಬೇಕು' ಎಂದು ಪ್ರಸಾದ್ ಹೇಳಿದರು.