ತಿರುವನಂತಪುರ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ‘ಯುಡಿಎಫ್’ ಸೋಮವಾರ ನಿರ್ಧರಿಸಿದೆ.
ಇತ್ತೀಚೆಗೆ ಬೆಳಕಿಗೆ ಬಂದಿರುವ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ವಿಜಯನ್ ಅವರ ಕಚೇರಿಯೇ ಶಾಮೀಲಾಗಿದ್ದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
‘ಮುಖ್ಯಮಂತ್ರಿ ವಿರುದ್ಧ ಅವಿಶ್ವಾಸ ನಿರ್ಣಯ ಮಾತ್ರವಲ್ಲ, ಸ್ಪೀಕರ್ ವಿರುದ್ಧವೂ ನಿರ್ಣಯ ಮಂಡಿಸಲು ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಯುಡಿಎಫ್ನ ಸಂಚಾಲಕ ಬೆನ್ನಿ ಹೆನನ್ ತಿಳಿಸಿದ್ದಾರೆ.
‘ಚಿನ್ನದ ಕಳ್ಳಸಾಗಾಣಿಕೆ ಆರೋಪಿಗಳಲ್ಲಿ ಒಬ್ಬರ ಜತೆಗೆ ಸ್ಪೀಕರ್ ಸಂಪರ್ಕ ಹೊಂದಿದ್ದರು. ಆದ್ದರಿಂದ ಅವರೂ ಆ ಹುದ್ದೆಯಿಂದ ಕೆಳಗಿಳಿಯಬೇಕು. ಆರೋಪಿಗಳನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ನಾವು ರಾಜ್ಯದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಿದ್ದೇವೆ’ ಎಂದು ಬೆನ್ನಿ ಹೇಳಿದರು.