ಲಖನೌ: ₹30 ಲಂಚ ನೀಡದ ಕಾರಣಕ್ಕೆ ರೋಗಿಯೊಬ್ಬರಿಗೆ ಸೇವೆ ನೀಡಲು ನಿರಾಕರಿಸಿದ ಘಟನೆ ಉತ್ತರ ಪ್ರದೇಶದಡಿಯೋರಿಯಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ರೋಗಿಯ ಬ್ಯಾಂಡೆಜ್ ಬದಲಿಸಲು ಅವರ ಪುತ್ರಿ ಮತ್ತು ಆರು ವರ್ಷದ ಮೊಮ್ಮಗ ಅವರನ್ನು ಸ್ಟ್ರೆಚರ್ನಲ್ಲಿ ತಳ್ಳಿಕೊಂಡು ಹೋಗಿರುವ ಅಮಾನವೀಯ ಘಟನೆ ನಡೆದಿದೆ.ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿದ್ದಜಿಲ್ಲೆಯ ಗೌರ ಗ್ರಾಮದ ನಿವಾಸಿ ಚೆಡಿ ಯಾದವ್ ಎಂಬುವರನ್ನು ಕಳೆದ ವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ಬ್ಯಾಂಡೆಜ್ ಬದಲಿಸಲು ಡ್ರೆಸ್ಸಿಂಗ್ ರೂಮ್ಗೆ ಕರೆದುಕೊಂಡು ಹೋಗುವಂತೆ ಆಸ್ಪತ್ರೆ ಸಿಬ್ಬಂದಿ ಬಳಿ ಪುತ್ರಿ ಬಿಂದು ದೇವಿ ಮನವಿ ಮಾಡಿದರು. ಆದರೆ, ಸಿಬ್ಬಂದಿ ₹ 30 ಕೇಳಿದ್ದಾರೆ. ‘ನಾನು ಬಡವಿ. ಪ್ರತಿದಿನ ಹಣ ನೀಡುವಷ್ಟು ಸಾಮರ್ಥ್ಯ ನನಗಿಲ್ಲ’ ಎಂದು ಬಿಂದು ತಿಳಿಸಿದ್ದಾರೆ.
‘ಎಷ್ಟೇ ಮನವಿ ಮಾಡಿದರೂ, ಸಿಬ್ಬಂದಿ ಮನಸ್ಸು ಕರಗಲಿಲ್ಲ. ಕೊನೆಗೆ ವಿಧಿಯಿಲ್ಲದೇ, ನಾನು ಮತ್ತು ನನ್ನ ಆರು ವರ್ಷದ ಮಗ ಕರೆದುಕೊಂಡು ಹೋದೆವು. ಅವನುಸ್ಟ್ರೆಚರ್ನನ್ನು ಹಿಂದಿನಿಂದ ನೂಕಿದ, ನಾನು ಮುಂದೆ ಎಳೆದುಕೊಂಡು ಹೋದೆ’ ಎಂದು ಬಿಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಈ ಘಟನೆ ನನ್ನ ಅರಿವಿಗೆ ಬಂದಿರಲಿಲ್ಲ. ವಿಡಿಯೊ ನೋಡಿದ್ದೇನೆ. ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದುಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ತಿಳಿಸಿದ್ದಾರೆ.
ಈ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ‘ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಕರುಣಾಜನಕ ಸ್ಥಿತಿಯನ್ನು ವಿಡಿಯೊ ಬಹಿರಂಗಪಡಿಸಿದೆ’ ಎಂದು ಹೇಳಿದೆ.