ಕಠ್ಮಂಡು: ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ಕೇರಳದಿಂದ ಬಂದಿದ್ದ ಎಂಟು ಪ್ರವಾಸಿಗರು ತಾವು ಬಾಡಿಗೆಗೆ ಪಡೆದಿದ್ದ ಕೊಠಡಿಯಲ್ಲಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಹಿಮಾಲಯದ ಮಡಿಲಲ್ಲಿರುವ ಮಕ್ವಾನ್ಪುರದ ಜನಪ್ರಿಯ ಪ್ರವಾಸಿ ತಾಣ ದಾಮನ್ಗೆನಾಲ್ವರ ಮಕ್ಕಳೊಂದಿಗೆ ಎರಡು ಕುಟುಂಬಗಳು ಬಂದಿದ್ದವು.
ಮಂಗಳವಾರ ಮುಂಜಾನೆ ಎಲ್ಲ ಎಂಟೂ ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದು ಕಂಡುಬಂತು. ತಕ್ಷಣ ಅವರನ್ನು ಕಠ್ಮಂಡು ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರೆಲ್ಲರೂ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಠಡಿಯನ್ನು ಬೆಚ್ಚಗೆ ಇರಿಸಲು ಅವರು ಗ್ಯಾಸ್ ಹೀಟರ್ ಬಳಿಸಿದ್ದರು. ಉಸಿರುಗಟ್ಟಿ ಅವರೆಲ್ಲರೂ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರವಾಸೋದ್ಯಮವೇ ನೇಪಾಳದ ಪ್ರಮುಖ ಆದಾಯ ಮೂಲ. ಕಳೆದ ವರ್ಷ ಸುಮಾರು 10 ಲಕ್ಷ ಪ್ರವಾಸಿಗರು ನೇಪಾಳಕ್ಕೆ ಭೇಟಿ ನೀಡಿದ್ದರು. ಇದರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚು.