ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ ಅಜಿತ್ ಪವಾರ್ ಅವರನ್ನು ಎನ್ಸಿಪಿಯು ಶನಿವಾರಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಕಿತ್ತೆಸೆದಿದೆ.
‘ಅಜಿತ್ ಪವಾರ್ ಬಿಜೆಪಿಯೊಂದಿಗೆ ಹೋಗಿರುವುದು ಅವರ ವೈಯಕ್ತಿಕ ನಿರ್ಧಾರ. ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ,’ಎಂದು ಎನ್ಸಿಪಿಯ ನಾಯಕ ಶರದ್ ಪವಾರ್ ಅವರು ಸ್ಪಷ್ಟನೆ ನೀಡಿದ ಬೆನ್ನಲ್ಲೇ ಪಕ್ಷದಿಂದ ಈ ಆದೇಶ ಹೊರಬಿದ್ದಿದೆ.
ಅಜಿತ್ ಪವಾರ್ ಅವರಿಂದ ತೆರವಾಗಿರುವ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ದಿಲೀಪ್ ಪಾಟೀಲ್ ಅವರನ್ನು ನೇಮಿಸಲಾಗಿದೆ.
ಈ ಮಧ್ಯೆ, ಅಜಿತ್ ಪವಾರ್ ಅವರು ತಮ್ಮ ಪಕ್ಷದ 54 ಶಾಸಕರ ಸಹಿಯುಳ್ಳ ಪತ್ರವನ್ನು ಪ್ರಮಾಣ ವಚನಕ್ಕೂ ಮೊದಲು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಒಪ್ಪಿಸಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.