ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಪೀಡಿತರಿಗೆ ರೈಲು ನಿಲ್ದಾಣ, ಆನಂದ ವಿಹಾರ್‌ನಲ್ಲಿ ಐಸೋಲೇಷನ್‌ ಕೋಚ್‌ಗಳು

Last Updated 15 ಜೂನ್ 2020, 8:54 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ಸೋಂಕು ಪೀಡಿತರ ಸಂಖ್ಯೆ ದಿನೇದಿನೇ ದ್ವಿಗುಣಗೊಳ್ಳುತ್ತ ಸಾಗಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದಿಡೀ ರೈಲು ನಿಲ್ದಾಣವನ್ನು ವೈದ್ಯಕೀಯ ಸೌಲಭ್ಯಕ್ಕೆ ಬಳಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ದೆಹಲಿ ಪೂರ್ವ ಭಾಗದಲ್ಲಿನ ಆನಂದ ವಿಹಾರ್ ಪ್ರದೇಶದಲ್ಲಿರುವ ಅತ್ಯಂತ ಜನನಿಬಿಡ ರೈಲು ನಿಲ್ದಾಣವನ್ನೇ ಪ್ರತ್ಯೇಕ ಬೋಗಿಗಳನ್ನು (ಐಸೋಲೇಷನ್‌ ಕೋಚ್) ಇರಿಸಲು ಸಿದ್ಧಪಡಿಸಲಾಗುತ್ತಿದೆ.

ಅಸ್ಸಾಂ, ಬಿಹಾರ್‌, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದತ್ತ ತೆರಳುವ ಎಲ್ಲ ರೈಲುಗಳ ಸಂಚಾರವನ್ನು ಈ ನಿಲ್ದಾಣದಿಂದ ಸೋಮವಾರದಿಂದಲೇ ರದ್ದುಪಡಿಸಿರುವ ರೈಲ್ವೆ ಇಲಾಖೆ, ಸೋಂಕಿತರ ಚಿಕಿತ್ಸೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಳಸಲು ಮುಂದಾಗಿದೆ.

ಈ ನಿಲ್ದಾಣದಿಂದ ತೆರಳುವ ಎಲ್ಲ ರೈಲುಗಳ ಸಂಚಾರವನ್ನು ಚಾಂದನಿ ಚೌಕ್‌ ಬಳಿ ಇರುವ ಹಳೆ ದೆಹಲಿ ನಿಲ್ದಾಣದಿಂದ ಆರಂಭಿಸಲು ಆದೇಶಿಸಲಾಗಿದ್ದು, ಆನಂದ ವಿಹಾರ್‌ ನಿಲ್ದಾಣದ ಏಳೂ ಪ್ಲಾಟ್‌ಫಾರ್ಮ್‌ಗಳಲ್ಲಿ ಐಸೋಲೇಷನ್‌ ಕೋಚ್‌ಗಳನ್ನು ನಿಲ್ಲಿಸಲು ಸೂಚಿಸಲಾಗಿದೆ.

ಈ ಮೂಲಕ ಕೋವಿಡ್–19 ಸೋಂಕಿತರಿಗಾಗಿ ದೇಶದಲ್ಲೇ ಮೊದಲ ಬಾರಿಗೆ ಇಡೀ ನಿಲ್ದಾಣವನ್ನೇ ಮೀಸಲಿಡಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳು ದೆಹಲಿ ಸರ್ಕಾರದೊಂದಿಗೆ ಇನ್ನೊಂದು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ನಿಲ್ದಾಣದಲ್ಲಿ ಎಷ್ಟು ಕೋಚ್‌ಗಳನ್ನು ಇರಿಸಬೇಕು ಎಂಬ ನಿರ್ಧಾರ ಪ್ರಕಟಿಸಲಾಗುವುದು. ಬಹುಶಃ ಮಂಗಳವಾರ ಅಥವಾ ಬುಧವಾರದಿಂದ ಈ ಕೋಚ್‌ಗಳು ರೋಗಿಗಳ ಚಿಕಿತ್ಸೆಗೆ ಲಭ್ಯವಾಗಲಿವೆ ಎಂದು ಅವರು ಹೇಳಿದ್ದಾರೆ.
ಮಾರ್ಚ್‌ 24ರಂದು ಲಾಕ್‌ಡೌನ್‌ ಘೋಷಣೆಯಾದ ಸಂದರ್ಭ ತಮ್ಮ ಊರುಗಳಿಗೆ ಮರಳಲು ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳ ವಲಸೆ ಕಾರ್ಮಿಕರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಆನಂದ ವಿಹಾರ್ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಿಗೆ ಲಗ್ಗೆ ಇರಿಸಿದ್ದರಿಂದ ಒಂದು ವಾರಕ್ಕೂ ಅಧಿಕ ಕಾಲ ಸಾಕಷ್ಟು ನೂಕುನುಗ್ಗಲು ಉಂಟಾಗಿತ್ತು.

ದೆಹಲಿಯಲ್ಲಿ ಭಾನುವಾರ 2,224 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಒಂದೇ ದಿನದಲ್ಲಿ ದಾಖಲಾದ ಅಧಿಕ ಪ್ರಕರಣಗಳ ಸಂಖ್ಯೆ ಇದಾಗಿದೆ. ಇದುವರೆಗೆ ಇಲ್ಲಿ 41,000ಕ್ಕೂ ಅಧಿಕ ಕೋವಿಡ್–19 ಪ್ರಕರಣಗಳು ಕಂಡು ಬಂದಿದ್ದು, 1,327 ಜನ ಸೋಂಕಿಗೆ ಬಲಿಯಾದಂತಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT