ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಚಿಸಿರುವ ಸಂಧಾನ ಸಮಿತಿಯಲ್ಲಿರುವ ಮೂವರೂ ತಮಿಳುನಾಡಿನವರೇ.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ. ಇಬ್ರಾಹಿಂ ಕಲೀಫುಲ್ಲಾ, ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ನ ಶ್ರೀಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನೊಳಗೊಂಡ ಸಂಧಾನ ಸಮಿತಿಯನ್ನು ಸುಪ್ರೀಂ ರಚಿಸಿದೆ.
2012–16ರ ಅವಧಿಯಲ್ಲಿಸುಪ್ರಿಂ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಕಲೀಫುಲ್ಲಾ ದಕ್ಷಿಣ ತಮಿಳುನಾಡಿನ ಕರೈಕುಡಿಯವರು. ಅದಕ್ಕೂ ಮೊದಲು ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು.ರವಿಶಂಕರ್ ಅವರ ಹುಟ್ಟೂರು ತಾಂಜಾವೂರು ಸಮೀಪದ ಪಾಪನಾಶಂ. ಪಂಚು ಚೆನ್ನೈ ಮೂಲದವರು.
ಸುಪ್ರೀಂ ನೇಮಕದ ಬಳಿಕ ಮಾಧ್ಯಮಗಳಿಗೆ ಪ್ರತ್ಯೇಕವಾಗಿ ಹೇಳಿಕೆ ನೀಡಿರುವ ಮೂವರೂ, ದಶಕಗಳಿಗೂ ಹೆಚ್ಚು ಕಾಲದ ವಿವಾದವನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
‘ನನ್ನ ನೇತೃತ್ವದಲ್ಲಿ ಸುಪ್ರಿಂ ಕೋರ್ಟ್ ಸಂಧಾನ ಸಮಿತಿಯನ್ನು ರಚಿಸಿರುವುದು ತಿಳಿದಿದೆ. ಆದೇಶ ಪ್ರತಿ ಇನ್ನೂ ಕೈಸೇರಿಲ್ಲ. ಸೌಹಾರ್ದಯುತವಾಗಿ ವಿವಾದವನ್ನು ಇತ್ಯರ್ಥಪಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡಲಿದ್ದೇವೆ’ ಎಂದು ಕಲೀಫುಲ್ಲಾ ಹೇಳಿದ್ದಾರೆ.
‘ದೀರ್ಘಕಾಲದಿಂದ ಪರಿಹಾರ ಕಾಣದ ವಿವಾದವನ್ನು ಸುಖಾಂತ್ಯಗೊಳಿಸಿ, ಸಮಾಜದಲ್ಲಿ ಸೌಹಾರ್ದತೆಯನ್ನು ನೆಲೆಗೊಳಿಸಿಸುವ ಸಲುವಾಗಿ ನಾವೆಲ್ಲರೂ ಒಗ್ಗಟ್ಟಾಗಿ ಗುರಿಯೆಡೆಗೆ ಸಾಗಬೇಕಾಗಿದೆ’ ಎಂದು ರವಿಶಂಕರ್ ಅಭಿಪ್ರಾಯಪಟ್ಟಿದ್ದಾರೆ.