ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಗದ್ದುಗೆ ಹಿಡಿಯಲು ಪ್ರಯತ್ನಿಸುತ್ತಿರುವ ಬಿಜೆಪಿ ತನ್ನ 240 ಸಂಸದರನ್ನು ಚುನಾವಣೆ ಪ್ರಚಾರ ಕಣಕ್ಕೆ ನಿಯೋಜಿಸಿದೆ.
ದೆಹಲಿ ವಿಧಾನಸಭೆ ಚುನಾವಣೆ ಫೆ. 8ರಂದು ನಡೆಯಲಿದ್ದು, ಫೆ. 6ರಂದು ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಮೂರು ದಿನಗಳಲ್ಲಿ ಪ್ರಚಾರದ ಕಾವು ಹೆಚ್ಚಿಸಲು ನಿರ್ಧರಿಸಿರುವ ಬಿಜೆಪಿ ಒಟ್ಟು 240 ಸಂಸದರನ್ನು ದೆಹಲಿಗೆ ನಿಯೋಜಿಸಿದ್ದು, ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದೆ.
ದೊಡ್ಡ ಪ್ರಮಾಣದಲ್ಲಿ ಸಂಸದರನ್ನು ಪ್ರಚಾರಕ್ಕೆ ಕಳುಹಿಸುವ ನಿರ್ಧಾರವನ್ನು ಪಕ್ಷದ ಸಂಸದೀಯ ಸಭೆಯಲ್ಲೇ ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಈ ಸಭೆಯ ನೇತೃತ್ವ ವಹಿಸಿದ್ದರು.
ದೆಹಲಿಯ ಪ್ರತಿ ಗಲ್ಲಿಗಳಲ್ಲಿಯೂ, ಅದರಲ್ಲಿಯೂ ಬಡ ವರ್ಗದವರು ಹೆಚ್ಚಿರುವ ಪ್ರದೇಶಗಳನ್ನು ಕೇಂದ್ರೀಕರಿಸಿ ಪ್ರಚಾರ ನಡೆಸುವಂತೆ ಸಂಸದರಿಗೆ ಸೂಚಿಸಲಾಗಿದೆ ಎಂದು ಪಕ್ಷದ ಅಧ್ಯಕ್ಷ ನಡ್ಡಾ ತಿಳಿಸಿದ್ದಾರೆ. ಅಲ್ಲದೆ, ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವನ್ನು ನಡ್ಡಾ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಬಡ ವರ್ಗವು ಅರವಿಂದ ಕೇಜ್ರಿವಾಲ್ ಅವರ ಎಎಪಿಯೊಂದಿಗೆ ಹೆಚ್ಚು ಗುರುತಿಸಿಕೊಂಡಿದೆ. ಈ ಮತ ಬ್ಯಾಂಕ್ ಮುರಿಯಲೆಂದೇ ಬಿಜೆಪಿ ತನ್ನ ಸಂಸದರನ್ನು ಕಣಕ್ಕಿಳಿಸಿದೆ ಎನ್ನಲಾಗಿದೆ.