ನವದೆಹಲಿ:ಬಜೆಟ್ ವಿಷಯ ಬಂದಾಗ ಒಬ್ಬೊಬ್ಬರದೂ ಒಂದೊಂದು ನಿರೀಕ್ಷೆ. ಆದಾಯ ತೆರಿಗೆ ಪಾವತಿಯಲ್ಲಿ ಮಿತಿ ಹೆಚ್ಚಳದ ನೀರಿಕ್ಷೆಯಲ್ಲಿ ಉದ್ಯೋಗನಿರತರು ಯೋಚಿಸಿದರೆ, ಇನ್ನು ಸಾಮಾನ್ಯ ವರ್ಗದ ಜನರು ಸರ್ಕಾರ ಬಡ ಮತ್ತು ಮಧ್ಯಮ ವರ್ಗಕ್ಕೆ ಯಾವೆಲ್ಲಾ ಹೊಸ ಯೋಜನೆ ಜಾರಿಗೆ ತರಲಿದೆ? ಅವುಗಳಿಂದ ಆರ್ಥಿಕವಾಗಿ ನಮಗೆಷ್ಟು ಲಾಭವಾಗಲಿದೆ? ಉಳಿತಾಯ ಎಷ್ಟಾಗಲಿದೆ? ಎಂಬೆಲ್ಲಾ ಲೆಕ್ಕಾಚಾರದಲ್ಲಿ ತೊಡಗುತ್ತಾರೆ.
ಈ ಎಲ್ಲವುಗಳ ಆಚೆಗೆಗಿನ ಕ್ಷೇತ್ರಗಳಲ್ಲಿ ದೇಶದ ರಕ್ಷಣಾ ವಿಷಯ ಪ್ರಮುಖವಾದುದು. ಭದ್ರತೆ ವಿಷಯದಲ್ಲಿ ಲೋಪವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಬೇಕಿರುವ ಉಪಗ್ರಹ ಆಧಾರಿತ ಸೇರಿದಂತೆ ಎಲ್ಲಾ ಬಗೆಯ ತಂತ್ರಜ್ಞಾನ ಅಭಿವೃದ್ಧಿ ಮತ್ತು ಯುದ್ಧೋಪಕರಣಗಳು, ಯುದ್ಧ ವಿಮಾನ, ಯುದ್ಧ ನೌಕೆಗಳ ನಿರ್ಮಾಣ ಮತ್ತು ಖರೀದಿಗೆ ಹೆಚ್ಚಿನ ಅನುದಾನ ಅಗತ್ಯವಿದೆ. ಆದ್ದರಿಂದ, ರಕ್ಷಣಾ ವಿಷಯದಲ್ಲಿ ರಾಜೀಯಾಗದೆ ಅಗತ್ಯ ಅನುದಾನ ಮೀಸಲಿರಿಸಬೇಕಾದ ತರ್ತು ಇದೆ.
* ಇದನ್ನೂ ಓದಿ:ಬಜೆಟ್ 2019 | ಕೇಂದ್ರ ಬಜೆಟ್ ರೆಡಿ ಆಗೋದು ಹೀಗೆ...
ಇ ಅಂಶಗಳನ್ನು ಗಮನಿಸಿ ನೋಡುವುದಾದರೆ, ರಕ್ಷಣಾ ಇಲಾಖೆಯ ಭೂ ಸೇನೆ, ವಾಯುಪಡೆ, ನೌಕಾಪಡೆ ಮೂರು ಕ್ಷೇತ್ರಗಳು ಅವುಗಳದ್ದೇ ಆದ ಕೊಡುಗೆಯನ್ನು ದೇಶಕ್ಕೆ ನೀಡುತ್ತಿವೆ. ಈ ಕ್ಷೇತ್ರಗಳಿಗೆ ಅಗತ್ಯವಿರುವ ಸೌಕರ್ಯ ಒದಗಿಸಲು ಬೇಕಿರುವ ಅನುದಾನ ಮೀಸಲಿರಿಸುವುದು ಹಾಗೂ ಇಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುವ ಯೋಧರಿಗೆ ಮತ್ತು ಅವರ ಕುಟುಂಬ, ಮಕ್ಕಳ ಶಿಕ್ಷಣ ಸೇರಿದಂತೆ ಅಗತ್ಯವಿರುವ ಎಲ್ಲಾ ಸೌಲಭ್ಯ ಒದಗಿಸಿಕೊಡುವುದು ಅತ್ಯಂತ ಪ್ರಮುಖವಾದವು.
ಮೂರನೇ ಒಂದು ಭಾಗದಷ್ಟು ಹೆಚ್ಚಿಸಬೇಕು–ತಜ್ಞರು
* ಅತ್ಯಂತ ಮಹತ್ವದ ಕೇತ್ರವಾದ ರಕ್ಷಣಾ ವಲಯಕ್ಕೆ ಬಜೆಟ್ನಲ್ಲಿ ಅನುದಾನ ಹಂಚಿಕೆ ವೇಳೆ ಕನಿಷ್ಠ ಮೂರನೇ ಒಂದರಷ್ಟು ಹೆಚ್ಚಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
* ಮೂಲಸೌಕರ್ಯ ಅಭಿವೃದ್ಧಿಯತ್ತ ಆದ್ಯತೆಗಳು ಬದಲಾಗಿವೆ ಎಂದು ಕೆಲವು ಉದ್ಯಮದ ಸದಸ್ಯರು ನಿರೀಕ್ಷಿಸಿದ್ದಾರೆ.
* ತಜ್ಞರ ಪ್ರಕಾರ, ಭಾರತದ ರಕ್ಷಣಾ ಕ್ಷೇತ್ರದಲ್ಲಿ ಹಳತಾದ ಉಪಕರಣಗಳನ್ನು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಬದಲಿಸುವ ಅಗತ್ಯವಿದೆ.
* ರಕ್ಷಣಾ ತಜ್ಞ ಅಜಯ್ ಶುಕ್ಲಾ ಅವರ ಪ್ರಕಾರ, ರಕ್ಷಣೆಯಲ್ಲಿ ಸರ್ಕಾರದ ಬಂಡವಾಳ ಹಂಚಿಕೆಯನ್ನು ಪ್ರಸ್ತುತ ವರ್ಷ ಕನಿಷ್ಠ ಮೂರನೇ ಒಂದರಷ್ಟು ಸುಮಾರು ₹ಒಂದು ಲಕ್ಷ ಕೋಟಿಯಿಂದ 1.3 ಲಕ್ಷ ಕೋಟಿವರೆಗೆ ಹೆಚ್ಚಿಸಬೇಕು ಎಂದಿದ್ದಾರೆ.
* ಭೂಸೇನೆಯ ನಿವೃತ್ತ ಮೇಜರ್ ಜನರಲ್ ಅಶ್ವಿನಿ ಸಿವಾಚ್ ಅವರ ಪ್ರಕಾರ, ಆಧುನಿಕ ಮುಖ್ಯ ಯುದ್ಧ ಟ್ಯಾಂಕರ್ಗಳು, ಸಶಸ್ತ್ರ ಡ್ರೋಣ್ಗಳು ಮತ್ತು ಕಾಲಾಳುಪಡೆಗೆ(ಸೇನೆ) ಲೈಟ್ ಮಷಿನ್ ಗನ್ಗಳಂತಹ ಸಲಕರಣೆ ಒದಗಿಸಲು ಈ ವಲಯಕ್ಕೆ ದೊಡ್ಡ ಉತ್ತೇಜನ ಬೇಕು ಎಂದಿದ್ದಾರೆ.
* ಸ್ಥಳೀಯವಾಗಿ ಹೊಸ ತಂತ್ರಜ್ಞಾನ ಅಭಿವೃದ್ಧಿಯನ್ನು ವೇಗವರ್ಧಿಸುವಲ್ಲಿ ರಕ್ಷಣಾ ಸಚಿವಾಲಯ ಗಂಭೀರವಾಗಿ ಪರಿಗಣಿಸುತ್ತದೆ ಎಂಬುದನ್ನು ರಕ್ಷಣಾ ಉದ್ಯಮವು ಎದುರು ನೋಡುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಇದಕ್ಕಾಗಿ ತಂತ್ರಜ್ಞಾನ ಅಭಿವೃದ್ಧಿಗೆ ₹10 ಸಾವಿರ ಕೋಟಿ ನಿಧಿಯನ್ನು ಮೀಸಲಿರಿಸಬೇಕು ಎಂದು ಶುಕ್ಲಾ ಹೇಳಿದ್ದಾರೆ.
* ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಮಾಜಿಕ ವಲಯದ ಖರ್ಚಿನ ಕಡೆಗೆ ಆದ್ಯತೆಗಳು ಬದಲಾಗಿವೆ ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಉದ್ಯಮದ ಕೆಲವು ಸದಸ್ಯರು ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.
* ಇನ್ನೂ ಕೆಲವರು, ರಾಷ್ಟ್ರೀಯ ಭದ್ರತೆಯು ಮರು ಆಯ್ಕೆಯಾಗಿರುವ ಎನ್ಡಿಎ ಸರ್ಕಾರಕ್ಕೆ ಪ್ರಮುಖ ಕಾರ್ಯಸೂಚಿಯಾಗಿದೆ ಎಂಬ ಅಂಶವನ್ನು ನಂಬಿದ್ದಾರೆ. ಇದಕ್ಕೆ ಜುಲೈ 5ರ ಬಜೆಟ್ ಮಂಡನೆಯು ರಚನಾತ್ಮಕ ಬದಲಾವಣೆಗೆ ಸಾಕ್ಷಿಯಾಗಬಹುದು.
* ‘ಈ ರಕ್ಷಣಾ ಕ್ಷೇತ್ರಕ್ಕೆ ಆಧುನೀಕರಣದ ತುರ್ತು ಅಗತ್ಯವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಕ್ಷಣಾ ಬಜೆಟ್ನಲ್ಲಿ ಕನಿಷ್ಠ ಶೇಕಡಾ 15ರಿಂದ 20ರಷ್ಟು ಹೆಚ್ಚಳವಾಗಬೇಕು’ ಎಂದು ಅಶ್ವಿನಿ ಸಿವಾಚ್ ಹೇಳಿದ್ದಾರೆ ಎಂದು ಎನ್ಡಿ ಟಿ.ವಿ ವರದಿ ಮಾಡಿದೆ.
* ಹೇಗಾದರೂ ಸರಿ, ರಕ್ಷಣಾ ಕ್ಷೇತ್ರ ಬಜೆಟ್ನಲ್ಲಿ ಪ್ರಮುಖ ಸ್ಥಾನವನ್ನು ಪಡೆಯಬೇಕು ಎಂದು ಶುಕ್ಲಾ ಹೇಳಿದ್ದಾರೆ.
ಹಿಂದಿನ ಬಜೆಟ್ | ರಕ್ಷಣಾ ವೆಚ್ಚ ₹3 ಲಕ್ಷ ಕೋಟಿಗೆ ಏರಿಕೆ
2019-20ರ ಸಾಲಿನಲ್ಲಿ ದೇಶದ ಬಜೆಟ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ರಕ್ಷಣಾ ಕ್ಷೇತ್ರಕ್ಕೆ ₹ 3 ಲಕ್ಷ ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು.
ರಕ್ಷಣಾ ವೆಚ್ಚಕ್ಕೆ ಇಷ್ಟೊಂದು ಹಣವನ್ನು ಮೀಸಲು ಇಟ್ಟಿದ್ದು ಇದೇ ಮೊದಲು. ಹಣಕಾಸು ಸಚಿವ ಅರುಣ್ ಜೇಟ್ಲಿ ಅನುಪಸ್ಥಿತಿಯಲ್ಲಿ ಪೀಯೂಷ್ ಗೋಯಲ್ ಬಜೆಟ್ ಮಂಡನೆ ಮಾಡಿದ್ದರು. ಈ ವೇಳೆ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸಿದ್ದರು. ಯೋಧರೇ ನಮ್ಮ ಘನತೆ ಮತ್ತು ಹೆಮ್ಮೆ ಎಂದು ಬಣ್ಣಿಸಿದ್ದರು.
ಒಂದೇ ಶ್ರೇಣಿ, ಒಂದೇ ಪಿಂಚಣಿ ಯೋಜನೆಗೆ ₹ 35 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆಗೆಗಾಗಿ ಕಾಂಗ್ರೆಸ್ ಸರ್ಕಾರ ಕೇವಲ ₹500 ಕೋಟಿಗಳನ್ನು ತೆಗೆದಿರಿಸಿದ್ದರೂ ಅದನ್ನು ಜಾರಿ ಮಾಡಿರಲಿಲ್ಲ. 40 ವರ್ಷಗಳ ಬಳಿಕ ಮೋದಿ ಸರ್ಕಾರ ಈ ಸಮಸ್ಯೆಯನ್ನು ನಿವಾರಿಸಿದೆ ಎಂದು ಹೇಳುವ ಮೂಲಕ ಪೀಯೂಷ್ ಗೋಯಲ್ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದರು.
ನಮ್ಮ ರಕ್ಷಣಾ ಬಲವನ್ನು ಹೆಚ್ಚಿಸಿಕೊಳ್ಳಬೇಕಿರುವ ಜತೆಗೆ ದೇಶದ ಭದ್ರತೆಗೂ ಆದ್ಯತೆ ನೀಡಬೇಕಾಗಿದೆ. ದೇಶದ ಗಡಿ ಕಾಯುವ ಸೈನಿಕರ ರಕ್ಷಣೆಯು ಸರ್ಕಾರದ ಕರ್ತವ್ಯವಾಗಿದೆ. ಯೋಧರು ಮತ್ತು ಮಾಜಿ ಯೋಧರ ಕಲ್ಯಾಣಕ್ಕಾಗಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಗೋಯಲ್ ಹೇಳಿದ್ದರು.
ಷೇರು ಬೆಲೆ ಏರಿಕೆಯಾಗಿತ್ತು
ರಕ್ಷಣಾ ಕ್ಷೇತ್ರಕ್ಕೆ ಬಜೆಟ್ನಲ್ಲಿ ದಾಖಲೆಯ ಅನುದಾನವನ್ನು ಮೀಸಲಿಡುತ್ತಿದ್ದಂತೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳ ಷೇರು ಬೆಲೆಗಳು ಮುಂಬೈ ಷೇರುಪೇಟೆಯಲ್ಲಿ ಶೇ 5ರವರೆಗೆ ಏರಿಕೆಯಾಗಿದ್ದವು.
* ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.