ಸಂವಿಧಾನ ಸಭೆಯು 1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಿತು. 1950ರ ಜನವರಿ 26ರಿಂದ ದೇಶದಲ್ಲಿ ಸಂವಿಧಾನ ಜಾರಿಯಾಯಿತು.
ಮಂಗಳವಾರಕ್ಕೆ (ನ. 26) ನಮ್ಮ ಸಂವಿಧಾನಕ್ಕೆ ಅಂಗೀಕಾರ ಲಭಿಸಿ 70 ವರ್ಷಗಳು ಪೂರ್ಣಗೊಳ್ಳುತ್ತಿವೆ. ಅಂದು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ನಡೆಯಲಿರುವ ‘ಸಂವಿಧಾನ ದಿನ’ ಕಾರ್ಯಕ್ರಮದಲ್ಲಿ ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
70 ವರ್ಷಗಳಲ್ಲಿ ಸಂವಿಧಾನವು ನೂರಕ್ಕೂ ಹೆಚ್ಚು ತಿದ್ದುಪಡಿಗಳನ್ನು ಕಂಡಿದೆ. ಆ ಕುರಿತ ಸಂಕ್ಷಿಪ್ತ ವಿವರ...
ತಿದ್ದುಪಡಿಗಳು
103 -ಈ ವರೆಗೆ ಸಂವಿಧಾನಕ್ಕೆ ಆಗಿರುವ ತಿದ್ದುಪಡಿಗಳು
1 -‘ಅಸಾಂವಿಧಾನಿಕ’ ಎಂದುಸುಪ್ರೀಂ ಕೋರ್ಟ್ ರದ್ದುಪಡಿಸಿದ ತಿದ್ದುಪಡಿ
ರಾಷ್ಟ್ರೀಯ ನ್ಯಾಯಾಂಗ ಆಯೋಗ ರಚಿಸುವ ಸಂವಿಧಾನದ 99ನೇ ತಿದ್ದುಪಡಿಗೆ 2014ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕಾರ ನೀಡಿದ್ದವು. ಆದರೆ ಇದು ‘ಅಸಾಂವಿಧಾನಿಕ’ ಎಂದುಸುಪ್ರೀಂ ಕೋರ್ಟ್ ಆ ತಿದ್ದುಪಡಿಯನ್ನು ರದ್ದುಪಡಿಸಿತು.
***
32 -ರಾಜ್ಯಗಳ ಮರುವಿಂಗಡಣೆ, ಪ್ರಾಂತಗಳ ವರ್ಗಾವಣೆ, ಪೂರ್ಣಪ್ರಮಾಣದ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸ್ಥಾನ ನೀಡುವುದು, ಕ್ಷೇತ್ರಗಳ ಮರುವಿಂಗಡಣೆ, ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವುದು, 8ನೇ ಪರಿಚ್ಛೇದಕ್ಕೆ ಭಾಷೆಯನ್ನು ಸೇರಿಸುವುದು ಮುಂತಾದ ವಿಚಾರಗಳಿಗೆ ನಡೆದ ತಿದ್ದುಪಡಿಗಳು
12 -ಎಸ್ಸಿ, ಎಸ್ಟಿ ಸಮುದಾಯ ಹಾಗೂ ಆಂಗ್ಲೊ ಇಂಡಿಯನ್ನರಿಗೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ನಡೆದ ತಿದ್ದುಪಡಿಗಳ ಸಂಖ್ಯೆ
8 -ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ಮೀಸಲಾತಿ, ಸಾಮಾಜಿಕ ನ್ಯಾಯವನ್ನು ಕಾಪಾಡುವ ದೊಡ್ಡ ಉದ್ದೇಶದ ಈಡೇರಿಕೆಗಾಗಿ ನಾಗರಿಕರ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವುದು, ಜಮೀನ್ದಾರಿ ಪದ್ಧತಿ ನಿರ್ಮೂಲನೆ ಮತ್ತು ಭೂ ಸುಧಾರಣಾ ವಿಚಾರಗಳಿಗೆ ಸಂಬಂಧಿಸಿದಂತೆ ನಡೆದ ತಿದ್ದುಪಡಿಗಳು
6 -ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಮಾಡುವುದೂ ಸೇರಿದಂತೆ ತೆರಿಗೆ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದ ತಿದ್ದುಪಡಿಗಳು
****
ರಾಜ್ಯಸಭೆ
107 -ರಾಜ್ಯಸಭೆಯು ಅಂಗೀಕರಿಸಿದ ಸಂವಿಧಾನ ತಿದ್ದುಪಡಿ ಮಸೂದೆಗಳು
1-ರಾಜ್ಯಸಭೆಯಲ್ಲಿ ಅಂಗೀಕೃತವಾಗಿ, ಲೋಕಸಭೆಯು ತಿರಸ್ಕರಿಸಿದ ತಿದ್ದುಪಡಿ
4p- ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದರೂ, ಸರ್ಕಾರದ ಅವಧಿ ಪೂರ್ಣಗೊಂಡಿದ್ದರಿಂದ ಲೋಕಸಭೆಯಲ್ಲಿ ಅಂಗೀಕಾರವಾಗದೆ ಅಸಿಂಧುವಾದ ಮಸೂದೆಗಳು
***
ಲೋಕಸಭೆ
106 -ಲೋಕಸಭೆ ಅಂಗೀಕರಿಸಿದ ಸಂವಿಧಾನ ತಿದ್ದುಪಡಿ ಮಸೂದೆಗಳು
3 -ಲೋಕಸಭೆಯಲ್ಲಿ ಅಂಗೀಕೃತವಾಗಿ ರಾಜ್ಯಸಭೆಯಲ್ಲಿ ತಿರಸ್ಕೃತಗೊಂಡ ಮಸೂದೆಗಳು
***
51ರಲ್ಲಿ ಮೊದಲ ತಿದ್ದುಪಡಿ
ಸಂವಿಧಾನ ಜಾರಿಯಾದ ಮರುವರ್ಷದಲ್ಲೇ ಅಂದರೆ 1951ರಲ್ಲಿ ಅದಕ್ಕೆ ಮೊದಲ ತಿದ್ದುಪಡಿಯನ್ನು ಮಾಡಲಾಯಿತು. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಎಸ್ಸಿ, ಎಸ್ಟಿ ಸಮುದಾಯದವರ ಅಭಿವೃದ್ಧಿಗೆ ಸೌಲಭ್ಯ ಒದಗಿಸುವುದು, ಜಮೀನ್ದಾರಿ ಪದ್ಧತಿ ನಿರ್ಮೂಲನೆ ಮಾಡುವುದು, ಯಾವುದೇ ವೃತ್ತಿ ಕೈಗೊಳ್ಳಲು ಅಥವಾ ಯಾವುದೇ ವ್ಯಾಪಾರ–ವಹಿವಾಟು ನಡೆಸಲು ನಾಗರಿಕರಿಗೆ ಅವಕಾಶ ನೀಡುವುದು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರುವ ಅವಕಾಶ ಈ ತಿದ್ದುಪಡಿಯ ಮುಖ್ಯ ಅಂಶಗಳಾಗಿದ್ದವು.
ಭೂ ಸುಧಾರಣಾ ಕಾಯ್ದೆಯನ್ನು ಬಲಪಡಿಸಲು ಸಂವಿಧಾನಕ್ಕೆ ವಿಧಿ 31ಎ ಹಾಗೂ 31ಬಿ ಗಳನ್ನು ಸೇರಿಸಲಾಯಿತಲ್ಲದೆ 9ನೇ ಪರಿಚ್ಛೇದವನ್ನು ಈ ತಿದ್ದುಪಡಿಯ ಮೂಲಕ ಸೇರಿಸಲಾಯಿತು.
***
ಸಂವಿಧಾನದ 103ನೇ ತಿದ್ದುಪಡಿಯನ್ನು 2019ರಲ್ಲಿ ಮಾಡಲಾಗಿದೆ. ಈ ತಿದ್ದುಪಡಿಯ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕ ಸಂಸ್ಥೆಗಳು ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲಾಯಿತು.
ಆಧಾರ: ರಾಜ್ಯಸಭೆ: ದಿ ಜರ್ನಿ ಸಿನ್ಸ್ 1952
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.