ನವದೆಹಲಿ: ‘ಕೊರೊನಾ ವೈರಸ್ ಸೃಷ್ಟಿಸಿರುವ ಚೀನಾದಿಂದ ಪರಿಹಾರದ ಮೊತ್ತ ಪಡೆಯಲುಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೊರೆ ಹೋಗುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.
ಮಧುರೈ ನಿವಾಸಿ ಕೆ.ಕೆ. ರಮೇಸ್ ಈ ಅರ್ಜಿಯನ್ನು ಸಲ್ಲಿಸಿದ್ದು, ‘ಚೀನಾ ಉದ್ದೇಶಪೂರ್ವಕವಾಗಿ ಭಾರತದ ವಿರುದ್ಧ ಜೈವಿಕ ಅಸ್ತ್ರ ಸೃಷ್ಟಿಸಿದೆ’ ಎಂದು ದೂರಿದ್ದಾರೆ.
‘ಸೋಂಕಿನಿಂದ ದೇಶದಲ್ಲಿ ಆರ್ಥಿಕ ಹಿಂಜರಿತದ ಜೊತೆಗೆ ನೂರಾರು ಜನರ ಪ್ರಾಣ ಹಾನಿಯಾಗಿದೆ. ಕೊರೊನಾ ವೈರಸ್ ಚೀನಾದ ವುಹಾನ್ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿದೆ ಎಂಬುದಕ್ಕೆ ಹಲವು ಪುರಾವೆಗಳಿವೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.