ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಸುಮಾರು 4 ಕೋಟಿ ವಲಸೆ ಕಾರ್ಮಿಕರಿದ್ದು, ಅವರಲ್ಲಿ 75 ಲಕ್ಷ ಜನರು ರೈಲು ಮತ್ತು ಬಸ್ಗಳಲ್ಲಿ ಮನೆಗೆ ಮರಳಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ಅವರು, ದೇಶದ ವಿವಿಧ ಭಾಗಗಳಿಂದ ವಲಸೆ ಕಾರ್ಮಿಕರನ್ನು ತಮ್ಮ ಸ್ಥಳಗಳಿಗೆ ಸಾಗಿಸಲು ಮೇ 1 ರಿಂದ 2,600 ಕ್ಕೂ ಹೆಚ್ಚು ಶ್ರಮಿಕ ವಿಶೇಷ ರೈಲುಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
'ಕಳೆದ ಜನಗಣತಿ ವರದಿಯ ಪ್ರಕಾರ (2011), ದೇಶದಲ್ಲಿ ನಾಲ್ಕು ಕೋಟಿ ವಲಸೆ ಕಾರ್ಮಿಕರಿದ್ದಾರೆ. ಲಾಕ್ಡೌನ್ ಘೋಷಿಸಿದ ನಂತರ ಸುಮಾರು 75 ಲಕ್ಷ ಮಂದಿ ತಮ್ಮ ಮನೆಗೆ ಮರಳಿದ್ದಾರೆ. ಅವರಲ್ಲಿ 35 ಲಕ್ಷ ಜನರು ಶ್ರಮಿಕ ರೈಲುಗಳಲ್ಲಿ ತಮ್ಮ ಮನೆಗಳನ್ನು ತಲುಪಿದ್ದಾರೆ. ಇನ್ನುಳಿದ 40 ಲಕ್ಷ ಜನರು ಬಸ್ಗಳಲ್ಲಿ ತೆರಳಿದ್ದಾರೆ' ಎಂದು ಪುಣ್ಯ ಶ್ರೀವಾಸ್ತವ ಹೇಳಿದ್ದಾರೆ.
ಕೊರೊನಾ ಸೋಂಕು ವ್ಯಾಪಕವಾಗುತ್ತಿದ್ದ ಹಿನ್ನೆಲೆಯಲ್ಲಿ, ಮಾರ್ಚ್ 24ರಿಂದ ದೇಶದಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಆ ಕಾರಣ, ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು.