ನವದೆಹಲಿ: ‘ನಿಮ್ಮ ಸಂಖ್ಯಾಬಲದ ಬಗ್ಗೆ ಚಿಂತಿಸಬೇಡಿ. ನಿಮ್ಮ ಪ್ರತಿ ಮಾತನ್ನೂ ಸರ್ಕಾರ ಗೌರವಯುತವಾಗಿ ಪರಿಗಣಿಸುತ್ತದೆ’–ಲೋಕಸಭೆಯ ಮುಂಗಾರು ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳನ್ನು ಉದ್ದೇಶಿಸಿ ಹೇಳಿದ ಮಾತಿದು.
ಲೋಕಸಭಾ ಕಲಾಪ ಆರಂಭಕ್ಕೂ ಮುನ್ನ ಸಂಸತ್ ಭವನದ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಧಾನಿ, ‘ಸದನವನ್ನು ಪ್ರವೇಶಿಸಿದಾಗ ಪಕ್ಷ, ಪ್ರತಿಪಕ್ಷ ಎಂಬುದನ್ನು ನಾವು ಮರೆಯಬೇಕು. ಷ್ಪಕ್ಷವಾಗಿವಿಷಯಗಳ ಕುರಿತು ಚಿಂತಿಸಬೇಕು’ ಎಂದು ಹೇಳಿದರು.
ಪಕ್ಷಪಾತ ರಹಿತವಾಗಿ, ದೇಶದ ಸಮಗ್ರ ಹಿತಾಸಕ್ತಿಯಿಂದ ಸದನದ ಚರ್ಚೆಗಳಲ್ಲಿ ಭಾಗವಹಿಸುವಂತೆ ಪ್ರಧಾನಿ ಅವರು ಎಲ್ಲ ಸಂಸದರಿಗೆ ಕರೆ ನೀಡಿದರು.
ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಸಕ್ರಿಯ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿ ಹೇಳಿದ ಅವರು,‘ವಿರೋಧ ಪಕ್ಷಗಳು ಸದನದ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಅಧಿವೇಶನ ಫಲಪ್ರದವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಲವು ಕಾರಣಗಳಿಗೆ ಪ್ರಸಕ್ತ ಲೋಕಸಭೆಯು ವಿಶೇಷವೆನಿಸಿದೆ. ಅತಿಹೆಚ್ಚಿನ ಸಂಖ್ಯೆಯ ಮಹಿಳೆಯರು ಆಯ್ಕೆಯಾಗಿದ್ದು, ಇತಿಹಾಸ ಸೃಷ್ಟಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.