ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‍ನಿಂದ ಆಮದು ಆಗುವ ಎಲ್ಲ ವಸ್ತುಗಳ ಆಮದು ಸುಂಕ ಶೇ.200 ಏರಿಸಿದ ಭಾರತ

Last Updated 16 ಫೆಬ್ರುವರಿ 2019, 17:46 IST
ಅಕ್ಷರ ಗಾತ್ರ

ನವದೆಹಲಿ:ಪರಮಾಪ್ತ ರಾಷ್ಟ್ರ ಸ್ಥಾನಮಾನ ಹಿಂದಕ್ಕೆ ಬೆನ್ನಲ್ಲೇ ಪಾಕಿಸ್ತಾನದಿಂದ ಆಮದಾಗುವ ಎಲ್ಲ ಸರಕುಗಳ ಮೇಲಿನ ಕಸ್ಟಮ್ಸ್‌ ಸುಂಕವನ್ನು ಭಾರತ ಶನಿವಾರ ಶೇ 200ರಷ್ಟು ಹೆಚ್ಚಿಸಿದೆ.

ಪುಲ್ವಾಮಾ ದಾಳಿಯ ಬೆನ್ನಲ್ಲೇ ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನ (ಎಂಎಫ್‌ಎನ್‌) ಹಿಂದಕ್ಕೆ ಪಡೆದಿತ್ತು.

ಸಿಮೆಂಟ್, ತಾಜಾ ಹಣ್ಣು, ಪೆಟ್ರೋಲಿಯಂ ಉತ್ಪನ್ನಗಳು, ಖನಿಜ, ಅದಿರು ಮತ್ತು ಚರ್ಮದ ಉತ್ಪನ್ನಗಳನ್ನು ಭಾರತವು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿದೆ.

ಇದರಿಂದ ಪಾಕಿಸ್ತಾನದ ಮೇಲೆ ₹3,482 ಕೋಟಿ ಆರ್ಥಿಕ ಹೊರೆ ಬೀಳಬಹುದು ಎಂದು ಹೇಳಲಾಗಿದೆ.

ಹೆಚ್ಚಿನ ಪರಿಣಾಮವಾಗದು:ಪಾಕಿಸ್ತಾನಕ್ಕೆ ಎಂಎಫ್‌ಎನ್‌ ಸ್ಥಾನಮಾನ ರದ್ದು ಮಾಡುವ ಭಾರತದ ನಿರ್ಧಾರದಿಂದ ಭಾವನಾತ್ಮಕ ಪರಿಣಾಮವಾಗಬಹುದೇ ಹೊರತು ಉಭಯ ರಾಷ್ಟ್ರಗಳ ವಾಣಿಜ್ಯ, ವಹಿವಾಟಿನ ಮೇಲೆ ಭಾರಿ ಪರಿಣಾಮವೇನೂ ಆಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದರಿಂದ ಪಾಕಿಸ್ತಾನದ ಮೇಲೆ ವಾಣಿಜ್ಯ, ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮವಾಗುವುದಿಲ್ಲ. ಒಂದು ವೇಳೆ ಪಾಕಿಸ್ತಾನ ಪ್ರತೀಕಾರ ಕ್ರಮ ತೆಗೆದುಕೊಂಡಲ್ಲಿ ಭಾರತದ ವಾಣಿಜ್ಯ ಕ್ಷೇತ್ರದ ಮೇಲೆ ಹೆಚ್ಚಿನ ದುಷ್ಪರಿಣಾಮವಾಗುವ ಸಾಧ್ಯತೆ ಇದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತ ನೀಡಿದ ಸೌಲಭ್ಯದ ಸಂಪೂರ್ಣ ಲಾಭ ಪಡೆಯಲು ಇನ್ನೂ ಪಾಕಿಸ್ತಾನ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿಲ್ಲ ಎನ್ನುವುದು ತಜ್ಞರು ನೀಡುವ ಪ್ರಮುಖ ಕಾರಣ.

ಎರಡೂ ರಾಷ್ಟ್ರಗಳ ನಡುವಿನ ವಾರ್ಷಿಕ ವಹಿವಾಟು ಮೊತ್ತ ಅಂದಾಜು ₹21,385 ಕೋಟಿ ಗಡಿಯನ್ನೂ ಮೀರುವುದಿಲ್ಲ. ಇದರಿಂದ ಆರ್ಥಿಕ ಬೆಳವಣಿಗೆಯ ಮೇಲೆ ಹೆಚ್ಚಿನ ಪರಿಣಾಮವಾಗುವುದಿಲ್ಲ ಎನ್ನುವುದು ಅವರ ಅಭಿಮತ.

ಪಾಕಿಸ್ತಾನದಿಂದ ಆಮದು ಕಡಿತಗೊಳಿಸಿ ಆ ದೇಶಕ್ಕೆ ರಫ್ತು ಪ್ರಮಾಣ ಹೆಚ್ಚಿಸುವತ್ತ ಭಾರತ ಮುಂದಾಗಬೇಕು ಎಂದು ಭಾರತೀಯ ವಿದೇಶ ವಾಣಿಜ್ಯ ಸಂಸ್ಥೆಯ (ಐಐಎಫ್‌ಟಿ) ಅಂತರರಾಷ್ಟ್ರೀಯ ವಾಣಿಜ್ಯ ತಜ್ಞ ಮೋಹನ ಜೋಶಿ ಸಲಹೆ ಮಾಡಿದ್ದಾರೆ.

ಪಾಕಿಸ್ತಾನವು ದುಬೈ ಮತ್ತು ಸಿಂಗಪುರದ ಮೂಲಕ ಭಾರತಕ್ಕೆ ರಫ್ತು ಮಾಡುತ್ತದೆ. ಆ ಬಗ್ಗೆ ಭಾರತಗಮನ ಹರಿಸಬೇಕು ಎನ್ನುತ್ತಾರೆ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಧ್ಯಾಪಕ ವಿಶ್ವಜೀತ್‌ ಧರ್‌ಹೇಳಿದ್ದಾರೆ.

India has withdrawn MFN status to Pakistan after the Pulwama incident. Upon withdrawal, basic customs duty on all goods exported from Pakistan to India has been raised to 200% with immediate effect. #Pulwama

ಇಮ್ರಾನ್ ಖಾನ್ ಭಾವಚಿತ್ರ ಮುಚ್ಚಿದ ಸಿಸಿಐ

ಮುಂಬೈ (ಪಿಟಿಐ): ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಸಿಆರ್‌ಪಿಎಫ್‌ ಯೋಧರ ನರಮೇಧವನ್ನು ಖಂಡಿಸಿರುವ ಇಲ್ಲಿ ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾ (ಸಿಸಿಎ) ತನ್ನ ರೆಸ್ಟೋರೆಂಟ್‌ನಲ್ಲಿದ್ದ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್ ಅವರ ಭಾವಚಿತ್ರಕ್ಕೆ ಹೊದಿಕೆ ಹಾಕಿ ಮುಚ್ಚಿದೆ.

ಪಾಕಿಸ್ತಾನ ಪ್ರಚೋದಿತ ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯು ಈ ಕೃತ್ಯ ಎಸಗಿರುವುದಾಗಿ ಘೋಷಿಸಿಕೊಂಡಿದೆ. ದೇಶಾದ್ಯಂತ ಪಾಕ್ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಜನರ ಆಕ್ರೋಶ ಮುಗಿಲುಮುಟ್ಟಿದೆ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂಗ ಸಂಸ್ಥೆಯಾಗಿರುವ ಸಿಸಿಐ ಕಚೇರಿಯು ಐತಿಹಾಸಿಕ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ಇದೆ. ಇದೇ ಆವರಣದಲ್ಲಿ ರೆಸ್ಟೋರೆಂಟ್ ಕೂಡ ಇದೆ. ಇಲ್ಲಿ ವಿಶ್ವದ ದಿಗ್ಗಜ ಕ್ರಿಕೆಟಿಗರ ಭಾವಚಿತ್ರಗಳನ್ನು ಹಾಕಲಾಗಿದೆ. 1992ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿದ್ದ ಪಾಕಿಸ್ತಾನ ತಂಡಕ್ಕೆ ಇಮ್ರಾನ್‌ ಖಾನ್ ನಾಯಕರಾಗಿದ್ದರು. ಅವರ ಗೌರವಾರ್ಥವಾಗಿ ಚಿತ್ರವನ್ನು ಅಳವಡಿಸಲಾಗಿತ್ತು.

1987ರಲ್ಲಿ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಇಮ್ರಾನ್ ಆವರು ಭಾರತದ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. 1989ರಲ್ಲಿ ಇಲ್ಲಿ ನಡೆದಿದ್ದ ನೆಹರು ಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT