ಶ್ರೀನಗರ: ಇರಾನ್ನಲ್ಲಿ ಕೋವಿಡ್–19 ಸೋಂಕಿತರಾಗಿರುವ 254ರ ಭಾರತೀಯರಲ್ಲಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿದವರಾಗಿದ್ದಾರೆ ಎಂದು ಕಾಶ್ಮೀರದ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.
ಸೋಂಕು ಪೀಡಿತರ ನೆರವಿಗಾಗಿ ಭಾರತದಿಂದ ಕಳುಹಿಸಿರುವ ವೈದ್ಯರು ನಿಯೋಗವು ತಾತ್ಕಾಲಿಕ ಪ್ರಯೋಗಾಲಯದಲ್ಲಿ ನಡೆಸಿರುವ ಪರೀಕ್ಷೆಯಿಂದ ಕೋವಿಡ್ 19 ಸೋಂಕು ದೃಢಪಟ್ಟಿದ್ದು,
ಸೋಂಕಿತ 254 ಜನರ ಪಟ್ಟಿ ಕಾಶ್ಮೀರದ ಸ್ಥಳೀಯ ಇಂಗ್ಲಿಷ್ ಪತ್ರಿಕೆಗೆ ಲಭ್ಯವಾಗಿದ್ದು, ಅವರಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ನ ಯಾತ್ರಿಕರು ಹಾಗೂ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೆಸರು, ಪಾಸ್ಪೋರ್ಟ್ ಹಾಗೂ ಭಾರತಕ್ಕೆ ವಾಪಸಾಗಲು ಕಾಯ್ದಿರಿಸಿದ ವಿಮಾನದ ಟಿಕೆಟ್ನ ಪಿಎನ್ಆರ್ ಸಂಖ್ಯೆಯನ್ನು ಒಳಗೊಂಡ ಯಾತ್ರಿಕರ ವಿವರ ಲಭ್ಯವಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಪತ್ರಿಕೆಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿರುವ ಕೆಲ ಯಾತ್ರಿಕರು, ‘ಈ ಪಟ್ಟಿಯನ್ನು ವಿವರವನ್ನು ಖಚಿತಪಡಿಸಿದ್ದು, ನಾವು ಚಿಂತಾಜನಕ ಪರಿಸ್ಥಿತಿಯಲ್ಲಿದ್ದು, ನಮ್ಮನ್ನು ವಾಪಸ್ ಕರೆಸಿಕೊಳ್ಳಲು ಭಾರತದ ರಾಯಭಾರ ಕಚೇರಿ ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ದೂರಿದ್ದಾರೆ.
ಟೆಹ್ರಾನ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿರುವ ಕಾಶ್ಮೀರದ ಎನ್.ಸೋಫಿ, ‘ಇರಾನಿನಲ್ಲಿ ಸಿಲುಕಿರುವ ನಮಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಸೋಂಕು ಪೀಡಿತ ನಮ್ಮನ್ನು ಸದ್ಯ ಭಾರತಕ್ಕೆ ಕರೆಸಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ’ ಎಂದು ದೂರಿದ್ದಾನೆ.
ಲೋಕಸಭೆಯಲ್ಲಿ ಈ ಕುರಿತು ಲಿಖಿತ ಉತ್ತರ ನೀಡಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಅವರು, ವಿವಿಧ ದೇಶಗಳಲ್ಲಿರುವ ದೇಶದ ಒಟ್ಟು 276 ಜನರಿಗೆ ಕೋವಿಡ್ 19 ದೃಢಪಟ್ಟಿದ್ದು, ಅವರಲ್ಲಿ 255 ಜನರು ಇರಾನ್, ಯುಎಇನಲ್ಲಿ 12ಮಂದಿ, ಇಟಲಿಯಲ್ಲಿ ಐದು ಹಾಗೂ ಹಾಂಗ್ ಕಾಂಗ್, ಕುವೈತ್, ರುವಾಂಡ ಹಾಗೂ ಶ್ರೀಲಂಕಾದಲ್ಲಿ ತಲಾ ಒಂದೊಂದು ಮಂದಿ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇರಾನಿನಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ನ 1,100 ಯಾತ್ರಿಕರು ಹಾಗೂ ಪ್ರಮುಖವಾಗಿ 300 ವಿದ್ಯಾರ್ಥಿಗಳು ಸಿಲುಕಿದ್ದಾರೆ. ಭಾರತವು ಫೆಬ್ರುವರಿ 26ರಿಂದ ಇರಾನ್ಗೆ ಅಂತರರಾಷ್ಟ್ರೀಯ ವಿಮಾನ ಸೇವೆಯನ್ನು ರದ್ದುಪಡಿಸಿದ್ದು, ಇದರಿಂದ ಕಾಶ್ಮೀರ ಕಣಿವೆಯ ನೂರಾರು ಯಾತ್ರಿಕರು ಅಲ್ಲೇ ಉಳಿದುಕೊಳ್ಳುವಂತಾಗಿದೆ.
ಇರಾನಿನಲ್ಲಿ ಸಿಲುಕಿರುವ ಬಹುತೇಕ ಯಾತ್ರಿಕರು ಹಾಗೂ ವಿದ್ಯಾರ್ಥಿಗಳು ಶಿಯಾ ಪಂಗಡಕ್ಕೆ ಸೇರಿದವರಾಗಿದ್ದು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ನಿಂದ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಹಾಗೂ ಯಾತ್ರಿಕರು ಅಲ್ಲಿಗೆ ತೆರಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.