ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫೋನಿ’ ಹೆಸರಲ್ಲಿ ಮೋದಿ, ದೀದಿ ಕಿತ್ತಾಟ

ತೀವ್ರಗೊಂಡ ರಾಜಕೀಯ ವಾಕ್ಸಮರ: ‘ಫೋನಿ’ ಚಂಡಮಾರುತವೂ ವಾಗ್ದಾಳಿಗೆ ಬಳಕೆ
Last Updated 6 ಮೇ 2019, 20:21 IST
ಅಕ್ಷರ ಗಾತ್ರ

ಕೋಲ್ಕತ್ತ: ಲೋಕಸಭೆಗೆ ವಿವಿಧ ಹಂತಗಳಲ್ಲಿ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿರುವುದರ ನಡುವೆಯೇ ರಾಜಕೀಯ ನಾಯಕರ ನಡುವಣ ವಾಕ್ಸಮರವೂ ತೀವ್ರಗೊಂಡಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ‘ಅಗ್ಗದ ರಾಜಕೀಯ’ ಮಾಡುತ್ತಿದ್ದಾರೆ, ಅವರು ‘ಅಹಂಕಾರಿ’ ಮತ್ತು ‘ಕೋಮುವಾದಿ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಮಮತಾ ಅವರು, ಮೋದಿ ಕರೆದಲ್ಲೆಲ್ಲ ಹೋಗಲು ತಾವು ಅವರ ಸೇವಕರಲ್ಲ ಎಂದಿದ್ದಾರೆ.

ಫೋನಿ ಚಂಡಮಾರುತ ಸೃಷ್ಟಿಸಿದ ಅನಾಹುತಗಳ ಬಗ್ಗೆ ಮಾಹಿತಿ ಕೇಳಲು ಕರೆ ಮಾಡಿದಾಗ ದೀದಿ (ಮಮತಾ ಬ್ಯಾನರ್ಜಿ) ಅವರು ಕರೆ ಸ್ವೀಕರಿಸಲೇ ಇಲ್ಲ. ಅಷ್ಟೇ ಅಲ್ಲ, ‘ಜೈ ಶ್ರೀರಾಂ’ ಎಂದು ಘೋಷಣೆ ಕೂಗುವ ಜನರನ್ನು ಅವರು ಬಂಧಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.

‘ಪ್ರಗತಿಯ ವೇಗತಡೆಯಾಗಿರುವ ದೀದಿ ಅವರು ಚಂಡಮಾರುತವನ್ನೂ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಚಂಡಮಾರುತದ ಬಗ್ಗೆ ಮಾತನಾಡಲು ಮಮತಾ ದೀದಿ ಅವರಿಗೆ ಕರೆ ಮಾಡಿದ್ದೆ. ಅವರು ಕರೆ ಸ್ವೀಕರಿಸಲಿಲ್ಲ. ದೀದಿ ಅವರು ಎಷ್ಟೊಂದು ಅಹಂಕಾರಿ ಎಂದರೆ ಮತ್ತೊಮ್ಮೆ ಕರೆ ಮಾಡಿದಾಗಲೂ ಅವರು ಸ್ವೀಕರಿಸಲಿಲ್ಲ’ ಎಂದು ಪೂರ್ವ ಮೇದಿನಿಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ಹೇಳಿದ್ದಾರೆ.

ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ‘ಜಾಗತಿಕ ಉಗ್ರ’ ಎಂದು ಘೋಷಿಸಿದ ಬಗ್ಗೆ ಮಮತಾ ಅವರು ಮೌನವಾಗಿದ್ದಾರೆ. ಈ ಬಗ್ಗೆ ಮಾತನಾಡಿದರೆ ತಮ್ಮ ಮತಬ್ಯಾಂಕ್‌ ಕಳೆದುಕೊಳ್ಳುವ ಭೀತಿ ಅವರಿಗೆ ಇದೆ ಎಂದೂ ಮೋದಿ ಹೇಳಿದರು.

‘ಈ ವಿಚಾರದಲ್ಲಿ ದೇಶವನ್ನು ಮಮತಾ ಅವರು ಶ್ಲಾಘಿಸಿದ್ದನ್ನು ಕಂಡಿದ್ದೀರಾ? ಮಸೂದ್‌ ವಿರುದ್ಧ ಮಾತನಾಡಿದರೆ ಮತಬ್ಯಾಂಕ್‌ಗೆ ಧಕ್ಕೆ ಆಗಬಹುದು ಎಂಬ ಭೀತಿ ಅವರಿಗೆ ಇದೆ. ಇಂತಹ ಮತಬ್ಯಾಂಕ್‌ ರಾಜಕಾರಣವೇ ಅವರ ಕಾಲಿನ ಅಡಿಯಲ್ಲಿನ ನೆಲ ಕುಸಿಯುವಂತೆ ಮಾಡಿದೆ’ ಎಂದರು.

‘ಜೈ ಶ್ರೀರಾಂ’ ಎಂದು ತಾವು ಘೋಷಣೆ ಕೂಗಿದರೆ ತಮ್ಮನ್ನೂ ಮಮತಾ ಅವರು ಬಂಧಿಸಬಹುದು ಎಂದೂ ಮೋದಿ ಹೇಳಿದರು.

ಮೋದಿ ಅವರ ಕರೆಯನ್ನು ಸ್ವೀಕರಿಸದಿರಲು ಕಾರಣವೇನು ಎಂಬುದನ್ನು ಮಮತಾ ಅವರು ವಿವರಿಸಿದ್ದಾರೆ. ‘ಚಂಡಮಾರುತ ಸಂದರ್ಭದಲ್ಲಿನ ಮುನ್ನೆಚ್ಚರಿಕೆ ಕ್ರಮಗಳ ಮೇಲೆ ನಿಕಟ ನಿಗಾ ಇರಿಸುವುದಕ್ಕಾಗಿ ನಾನು ಖರಗ್‌ಪುರದಲ್ಲಿ ಇದ್ದೆ. ಹಾಗಾಗಿ ಪ್ರಧಾನಿ ಕರೆ ಸ್ವೀಕರಿಸಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ.

ಅಷ್ಟೇ ಅಲ್ಲದೆ, ಪ್ರಧಾನಿಯವರು ಕಾಲೈಕುಂಡದಲ್ಲಿ ಸಭೆ ಕರೆದಿದ್ದರು. ಚುನಾವಣಾ ಪ್ರಚಾರಕ್ಕಾಗಿ ಅವರು ಅಲ್ಲಿಗೆ ಬಂದಿದ್ದರು. ಅವರು ಕರೆದಲ್ಲಿಗೆಲ್ಲ ಹೋಗಲು ನಾವೇನು ಅವರ ಸೇವಕರೇ? ಅವರು ಕರೆ ಮಾಡಿದಾಗ ಹೋಗಿಲ್ಲ, ಸಹಕಾರ ಕೊಡುತ್ತಿಲ್ಲ ಎಂದು ಆರೋಪಿಸಬಹುದು. ಚುನಾವಣೆ ಸಮಯದಲ್ಲಿ, ಅವಧಿ ತೀರಿದ ಪ್ರಧಾನಿಯೊಂದಿಗೆ ನಾನು ಯಾಕೆ ವೇದಿಕೆ ಹಂಚಿಕೊಳ್ಳಲಿ’ ಎಂದು ಮಮತಾ ಪ್ರಶ್ನಿಸಿದ್ದಾರೆ.

ಈ ಚುನಾವಣೆಯಲ್ಲಿ ಮೋದಿ ಅವರಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದು ಮಮತಾ ಹೇಳಿದ್ದಾರೆ.

ಅಡ್ವಾಣಿ ಮುಖಕ್ಕೆ ಮೋದಿ ಪಂಚ್‌: ರಾಹುಲ್‌

ಭಿವಾನಿ (ಹರಿಯಾಣ): ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕುಸ್ತಿಪಟುವಿಗೆ (ಬಾಕ್ಸರ್‌) ಹೋಲಿಸಿದ್ದಾರೆ. ನಿರುದ್ಯೋಗದ ವಿರುದ್ಧ ಹೋರಾಡುವುದಕ್ಕಾಗಿ ಅವರು ಕುಸ್ತಿ ಅಖಾಡಾ ಪ್ರವೇಶಿಸಿದರು. ಆದರೆ, ತಮ್ಮ ಗುರು (ಕೋಚ್‌), ಹಿರಿಯ ಮುಖಂಡ ಅಡ್ವಾಣಿ ಅವರಿಗೇ ಪಂಚ್‌ ಕೊಟ್ಟರು ಎಂದು ರಾಹುಲ್‌ ಹೇಳಿದ್ದಾರೆ.

ಕುಸ್ತಿ ತರಬೇತಿಗೆ ಪ್ರಸಿದ್ಧವಾಗಿರುವ ಭಿವಾನಿಯಲ್ಲಿ ನಡೆಸಿದ ಚುನಾವಣಾ ಪ್ರಚಾರದಲ್ಲಿ ರಾಹುಲ್‌ ಕುಸ್ತಿ ಅಖಾಡದ ಹೋಲಿಕೆ ಮಾಡಿದರು. ಪ್ರಸಿದ್ಧ ಕುಸ್ತಿಪಟು ಮತ್ತು ದೆಹಲಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ವಿಜೇಂದ್ರ್‌ ಸಿಂಗ್‌ ಕೂಡ ಇಲ್ಲಿಯವರೇ.

‘ಕುಸ್ತಿಪಟು ನರೇಂದ್ರ ಮೋದಿ ಅವರು ತಮ್ಮ 56 ಇಂಚಿನ ಎದೆಯ ಬಗ್ಗೆ ಕೊಚ್ಚಿಕೊಳ್ಳುತ್ತಾರೆ. ನಿರುದ್ಯೋಗ, ರೈತರ ಸಮಸ್ಯೆಗಳು, ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಅವರು ಹೇಳಿದ್ದರು. ಆದರೆ ಐದು ವರ್ಷಗಳಲ್ಲಿ ಅವರು ಭಾರತದ ಬಡವರು, ದುರ್ಬಲ ವರ್ಗಗಳ ಜನರು, ರೈತರಿಗೆ ಗುದ್ದು ಕೊಟ್ಟಿದ್ದಾರೆ. ಈ ಜನರು ಈಗ ತಮಗೆ ಈ ಕುಸ್ತಿಪಟು ಬೇಡ ಎನ್ನುತ್ತಿದ್ದಾರೆ’ ಎಂದು ರಾಹುಲ್‌ ಹೇಳಿದರು.

ಮೋದಿ ಅವರ ಕೋಚ್‌ ಅಡ್ವಾಣಿ, ಗಡ್ಕರಿ ಎಲ್ಲರೂ ಇದ್ದರು. ಕುಸ್ತಿ ಅಖಾಡಕ್ಕೆ ಇಳಿದ ಮೋದಿ ಅವರು ಅಡ್ವಾಣಿ ಅವರ ಮುಖಕ್ಕೇ ಗುದ್ದಿಬಿಟ್ಟರು. ನಂತರ ಅವರು ನೋಟು ರದ್ದತಿ ಮತ್ತು ಗಬ್ಬರ್‌ ಸಿಂಗ್‌ ತೆರಿಗೆ ಮೂಲಕ ಸಣ್ಣ ವರ್ತಕರನ್ನು ಬೀಳಿಸಿಬಿಟ್ಟರು. ಈ ನಿರ್ಧಾರಗಳು ಹೇಗೆ ಮಾರಕವಾದವು ಎಂಬುದು ಇಡೀ ದೇಶಕ್ಕೆ ತಿಳಿದಿದೆ ಎಂದುರಾಹುಲ್‌ ಹೇಳಿದ್ದಾರೆ.

‘ಕುಸ್ತಿಪಟು ಅಲ್ಲಿಗೇ ನಿಲ್ಲಿಸಲಿಲ್ಲ. ಸಾಲ ಮನ್ನಾ ಮತ್ತು ಬೆಂಬಲ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರ ಮುಖಕ್ಕೆ ಗುದ್ದಿದರು. ಇಷ್ಟೆಲ್ಲ ಆದ ಬಳಿಕ ಕುಸ್ತಿಪಟು ತಬ್ಬಿಬ್ಬಾದರು. ಯಾಕೆಂದರೆ ಯಾರ ಮೇಲೆ ಹೋರಾಟ ನಡೆಸಬೇಕು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಈಗ ಈ ಕುಸ್ತಿಪಟು ನೆಲಕ್ಕೆ ಬಿದ್ದು ಗಾಳಿಯಲ್ಲಿಯೇ ಗುದ್ದಾಡುತ್ತಿದ್ದಾರೆ’ ಎಂದು ರಾಹುಲ್‌ ಹೇಳಿದ್ದಾರೆ.

ಈಗ ಮೋದಿ ಅವರನ್ನು ಜನರು ಅಧಿಕಾರದಿಂದ ಕೆಳಕ್ಕೆ ಇಳಿಸಲಿದ್ದಾರೆ ಎಂಬ ವಿಶ್ವಾಸವನ್ನೂ ಅವರು
ವ್ಯಕ್ತಪಡಿಸಿದ್ದಾರೆ.

‘ರಾಜೀವ್‌ ಹೆಸರಲ್ಲಿ ಚುನಾವಣೆ ಎದುರಿಸಿ’

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹೆಸರನ್ನೇ ಮುಂದಿಟ್ಟುಕೊಂಡು ಮುಂದಿನ ಹಂತಗಳಲ್ಲಿ ಕಾಂಗ್ರೆಸ್‌ ಚುನಾವಣಾ ಪ್ರಚಾರ ನಡೆಸಲಿ ಎಂದು ಪ್ರಧಾನಿ ಮೋದಿ ಅವರು ಸವಾಲೆಸೆದಿದ್ದಾರೆ. ‘ರಾಜೀವ್‌ ಅವರು ಭ್ರಷ್ಟಾಚಾರಿ ನಂ.1 ಆಗಿದ್ದರು’ ಎಂದು ಇತ್ತೀಚೆಗಷ್ಟೇ ಮೋದಿ ಅವರು ಹೇಳಿದ್ದರು.

ಲೋಕಸಭಾ ಚುನಾವಣೆಯ ಇನ್ನೆರಡು ಹಂತಗಳು ಉಳಿದಿವೆ. ಈ ಹಂತಗಳ ಮತದಾನಕ್ಕೆ ಮೊದಲು ಬೊಫೋರ್ಸ್‌ ಮತ್ತು ಇತರ ವಿಚಾರಗಳ ಬಗ್ಗೆ ಕಾಂಗ್ರೆಸ್‌ ಚರ್ಚೆಗೆ ಬರಲಿ ಎಂದೂ ಮೋದಿ ಅವರು ಆಹ್ವಾನ ನೀಡಿದ್ದಾರೆ.

‘ಹೆಸರುವಾಸಿ ಪರಿವಾರದ (ಗಾಂಧಿ–ನೆಹರೂ ಕುಟುಂಬ) ವ್ಯಕ್ತಿಯೊಬ್ಬರು ಭ್ರಷ್ಟಾಚಾರಿ ನಂ. 1 ಆಗಿದ್ದರು ಎಂದು ಕೆಲವು ದಿನಗಳ ಹಿಂದೆ ನಾನು ಹೇಳಿದ್ದೆ. ಇದರಿಂದ ಹಲವರಿಗೆ ಹೊಟ್ಟೆ ಉರಿ ಬಂತು. ಅವರು ಅಳಲಾರಂಭಿಸಿದರು. ಅವರು ಹೆಚ್ಚು ಹೆಚ್ಚು ಅತ್ತಷ್ಟು ಈಗಿನ ತಲೆಮಾರಿನ ಜನರಿಗೆ ಹಳೆಯ ಸತ್ಯಗಳು ಅರಿವಾಗುತ್ತವೆ’ ಎಂದು ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ಭದ್ರತೆ ಮತ್ತು ವಿಶೇಷವಾಗಿ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ಬಗ್ಗೆ ಚರ್ಚೆಗೆ ಬರುವಂತೆ ಮೋದಿ ಅವರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಹಲವು ಬಾರಿ ಸವಾಲು ಹಾಕಿದ್ದರು.

ಆಯೋಗಕ್ಕೆ ದೂರು

ಮಾಜಿ ಪ್ರಧಾನಿ ದಿ.ರಾಜೀವ್‌ ಗಾಂಧಿ ಕುರಿತು ‘ಭ್ರಷ್ಟಾಚಾರಿ ನಂ. 1’ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಇದೇ ಸಂದರ್ಭದಲ್ಲಿ ಎನ್‌ಡಿಎ ಸರ್ಕಾರದ ಪ್ರಮುಖ ಕಾರ್ಯಕ್ರಮಗಳ ವೈಫಲ್ಯಗಳನ್ನು ಪಟ್ಟಿಮಾಡಿ ತರಾಟೆಗೆ ತೆಗೆದುಕೊಂಡಿದೆ.

ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಸ್ಯಾಮ್‌ ಪಿತ್ರೋಡಾ ಮತ್ತು ಪಂಜಾಬ್‌ನ ಸಚಿವ ನವಜ್ಯೋತ್‌ ಸಿಂಗ್ ಸಿಧು ಅವರು ಮೋದಿ ವಿರುದ್ಧ ಹರಿಹಾಯ್ದಿದ್ದು, ಎನ್‌ಡಿಎ ಸರ್ಕಾರದ ಯೋಜನೆಗಳ ವೈಫಲ್ಯಗಳನ್ನು ಪಟ್ಟಿಮಾಡಿದ್ದಾರೆ. ಮೃತ ವ್ಯಕ್ತಿಯೊಬ್ಬರ ಬಗೆಗೆ, ಮಹಾತ್ಮಾಗಾಂಧಿ ಅವರ ಮಣ್ಣಿನ ಭೂಮಿ ಗುಜರಾತ್‌ನಿಂದ ಬಂದ ವ್ಯಕ್ತಿಯೊಬ್ಬ ತುಚ್ಛವಾಗಿ ಮಾತನಾಡುತ್ತಾರೆ ಎಂಬುದನ್ನುನಂಬಲಾಗುತ್ತಿಲ್ಲ ಎಂದು ಪಿತ್ರೋಡಾ ಹರಿಹಾಯ್ದರು.

ಮೋದಿ ಅವರನ್ನು ತಮ್ಮ ವ್ಯಂಗ್ಯ ಭರಿತ ಶೈಲಿಯಲ್ಲಿ ಟೀಕಿಸಿದ ಸಿಧು, ‘ಮೋದಿ ಅವರು ರಾಜ ಚಾರ್ಲ್ಸ್‌ ಅರಮನೆ ಎದುರಿರುವ ತೋರಿಕೆಯ ಕುದುರೆಯಂತೆ. ಕಾಂಗ್ರೆಸ್‌ ಎಂದಿಗೂ ರೇಸ್ ಗೆಲ್ಲುವ ಕುದುರೆಯಂತೆ’ ಎಂದರು.

***

ಅಹಂಕಾರಿಯಾಗಿರುವ ದೀದಿ ಅವರು ನನ್ನ ಬಳಿ ಮಾತನಾಡಲಿಲ್ಲ. ಪ್ರಗತಿಯ ವೇಗತಡೆಯಾಗಿರುವ ಅವರಿಗೆ ಅಗ್ಗದ ರಾಜಕಾರಣದಲ್ಲಿ ಮಾತ್ರ ಹೆಚ್ಚು ಆಸಕ್ತಿ

-ನರೇಂದ್ರ ಮೋದಿ, ಪ್ರಧಾನಿ

ಮೋದಿ ಅವರೇ, ಪಶ್ಚಿಮ ಬಂಗಾಳದತ್ತ ನೋಡಬೇಡಿ. ನೀವು ಸೋಲುವುದು ಖಚಿತ. ಮೋದಿ ನೇತೃತ್ವದಲ್ಲಿ ಚಿತ್ರಹಿಂಸೆ ನೀಡುವ ಸರ್ಕಾರ ನಮಗೆ ಬೇಡ. ನಾವು ಕೇಂದ್ರದಲ್ಲಿ ‘ಸಂಯುಕ್ತ ಭಾರತ’ ಸರ್ಕಾರ ರಚಿಸಲಿದ್ದೇವೆ. ನವ ಭಾರತ ನಿರ್ಮಾಣದ ಪ್ರಯತ್ನ ನಡೆಸಲಿದ್ದೇವೆ

–ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT